ADVERTISEMENT

ಟೆಂಪೊ ಹರಿದು ಮಗು ಸಾವು

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2018, 20:41 IST
Last Updated 9 ನವೆಂಬರ್ 2018, 20:41 IST

ಬೆಂಗಳೂರು: ವರ್ತೂರಿನ ಕೃಷ್ಣಪ್ಪ ಲೇಔಟ್‌ನಲ್ಲಿ ಗುರುವಾರ ಮಧ್ಯಾಹ್ನ ಟೆಂಪೊ ಹರಿದು ಎರಡೂವರೆ ವರ್ಷದ ಮಹಾಂತೇಶ್ ಎಂಬ ಮಗು ಮೃತಪಟ್ಟಿದೆ.

ಮಹಾಂತೇಶ್, ಯಾದಗಿರಿಯ ನಾಗೇಶ್ ಹಾಗೂ ಸುನೀತಾ ದಂಪತಿ ಮಗು. ಕೆಲಸ ಅರಸಿ ಮೂರು ತಿಂಗಳ ಹಿಂದೆ ನಗರಕ್ಕೆ ಬಂದಿದ್ದ ದಂಪತಿ, ತೂಬರಹಳ್ಳಿಯಲ್ಲಿ ನೆಲೆಸಿದ್ದಾರೆ.

ಮಧ್ಯಾಹ್ನ 12.30ರ ಸುಮಾರಿಗೆ ದಂಪತಿ ಕೃಷ್ಣಪ್ಪ ಲೇಔಟ್‌ನ ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಮಗು ರಸ್ತೆಯಲ್ಲಿ ಆಟವಾಡುತ್ತಿತ್ತು.

ADVERTISEMENT

ಇದೇ ವೇಳೆ ಕಟ್ಟಡ ನಿರ್ಮಾಣದ ಸಾಮಗ್ರಿಗಳನ್ನು ತುಂಬಿಕೊಂಡು ಟೆಂಪೊ ಅಲ್ಲಿಗೆ ಬಂದಿತ್ತು. ಸಾಮಾನುಗಳನ್ನು ಇಳಿಸಿದ ನಂತರ ಚಾಲಕ ಮುರಾರಿ, ವಾಹನವನ್ನು ಹಿಂದಕ್ಕೆ ತೆಗೆದುಕೊಂಡರು. ಆಗ ಮಗು ಚಕ್ರಕ್ಕೆ ಸಿಲುಕಿಕೊಂಡಿತು ಎಂದು ವೈಟ್‌ಫೀಲ್ಡ್ ಸಂಚಾರ ಪೊಲೀಸರು ಹೇಳಿದ್ದಾರೆ.

ಕೂಡಲೇ ಪೋಷಕರು ಹಾಗೂ ಕಾರ್ಮಿಕರು ಆಸ್ಪತ್ರೆಗೆ ಕರೆದೊಯ್ದರು. ಆದರೆ, ಮಗು ಬದುಕುಳಿಯಲಿಲ್ಲ. ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದು, ಶೋಧ ಕಾರ್ಯದಲ್ಲಿ ತೊಡಗಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕಾರು ಗುದ್ದಿ ಸಾವು: ದೇವನಹಳ್ಳಿ ಸಮೀಪದ ಡಾಬಾ ಗೇಟ್ ಬಳಿ ಗುರುವಾರ ರಾತ್ರಿ ರಸ್ತೆ ದಾಟುವಾಗ ಕಾರು ಡಿಕ್ಕಿ ಹೊಡೆದು ದಿನೇಶ್ (38) ಎಂಬುವರು ಮೃತಪಟ್ಟಿದ್ದಾರೆ.

ಸಿಂಗನಹಳ್ಳಿ ನಿವಾಸಿಯಾದ ಅವರು, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ವಚ್ಛತಾ ಕೆಲಸ ಮಾಡುತ್ತಿದ್ದರು. 8.30ರ ಸುಮಾರಿಗೆ ಮನೆಗೆ ತೆರಳುತ್ತಿದ್ದಾಗ, ಸ್ವಿಫ್ಟ್ ಡಿಸೈರ್ ಕಾರು ಗುದ್ದಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.

ಅಪಘಾತದ ಬಳಿಕ ಕಾರು ವಿಭಜಕಕ್ಕೆ ಅಪ್ಪಳಿಸಿ ಮಗುಚಿ ಬಿದ್ದಿದ್ದರಿಂದ, ಅದರ ಚಾಲಕ ತಿಮ್ಮೇಗೌಡ ಸಹ ಗಾಯಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.