ADVERTISEMENT

ಅಕ್ರಮ‌ ಆಸ್ತಿ‌ ಹೊಂದಿರುವ ಆರೋಪ: ಕೆಎಎಸ್ ಅಧಿಕಾರಿ ಮೇಲೆ‌ ಎಸಿಬಿ ದಾಳಿ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2020, 4:33 IST
Last Updated 7 ನವೆಂಬರ್ 2020, 4:33 IST
ಕೆಎಎಸ್ ಅಧಿಕಾರಿ ಡಾ.ಬಿ.‌ಸುಧಾ ಅವರ ಮನೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿ ಐಷಾರಾಮಿ ವಸ್ತುಗಳ ಮಾಹಿತಿ ಪಡೆಯುತ್ತಿರುವ ತನಿಖಾ ತಂಡ
ಕೆಎಎಸ್ ಅಧಿಕಾರಿ ಡಾ.ಬಿ.‌ಸುಧಾ ಅವರ ಮನೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿ ಐಷಾರಾಮಿ ವಸ್ತುಗಳ ಮಾಹಿತಿ ಪಡೆಯುತ್ತಿರುವ ತನಿಖಾ ತಂಡ   
""

ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇಲೆ‌ ಕೆಎಎಸ್ ಅಧಿಕಾರಿ ಡಾ.ಬಿ. ಸುಧಾ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಿರುವ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ), ಶನಿವಾರ ಬೆಳಿಗ್ಗೆಯೇ ಆರು ಸ್ಥಳಗಳ ಮೇಲೆ‌ ದಾಳಿ ನಡೆಸಿದೆ.

ಸುಧಾ ಈ ಹಿಂದೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ‌ ವಿಶೇಷ ಭೂಸ್ವಾಧೀನಾಧಿಕಾರಿ ಹುದ್ದೆಯಲ್ಲಿದ್ದರು. ಪ್ರಸ್ತುತ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ಪ್ರಧಾನ‌ ಕಚೇರಿಯಲ್ಲಿ ಆಡಳಿತಾಧಿಕಾರಿ ಹುದ್ದೆಯಲ್ಲಿದ್ದಾರೆ.

ಆರೋಪಿ ಅಧಿಕಾರಿ ವಿರುದ್ಧ ಸಾರ್ವಜನಿಕರೊಬ್ಬರು ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು. ಈ ಕುರಿತು ತನಿಖೆ‌ ನಡೆಸುವಂತೆ ನ್ಯಾಯಾಲಯ ಎಸಿಬಿಗೆ ಆದೇಶಿಸಿತ್ತು.‌ ಪ್ರಕರಣ ದಾಖಲಿಸಿಕೊಂಡಿರುವ ಎಸಿಬಿ ಅಧಿಕಾರಿಗಳು, ಶೋಧ ನಡೆಸುತ್ತಿದ್ದಾರೆ.

ADVERTISEMENT

ಕೊಡಿಗೆಹಳ್ಳಿಯಲ್ಲಿರುವ ಸುಧಾ ಅವರ ಮನೆ, ಯಲಹಂಕದಲ್ಲಿರುವ ಫ್ಲ್ಯಾಟ್, ಬ್ಯಾಟರಾಯನಪುರದಲ್ಲಿರುವ ಪರಿಚಿತರ ಮನೆ, ಮೈಸೂರಿನ ಶ್ರೀರಾಂಪುರದಲ್ಲಿರುವ ಪರಿಚಿತರ ಮನೆ, ಉಡುಪಿಯ ಹೆಬ್ರಿ ರಸ್ತೆಯಲ್ಲಿರುವ ತೆಂಕ‌ ಮಿಜಾರಿನಲ್ಲಿರುವ ಪರಿಚಿತರ ಮನೆ ಹಾಗೂ ಬೆಂಗಳೂರಿನ ಶಾಂತಿನಗರದಲ್ಲಿರುವ ಆರೋಪಿ ಅಧಿಕಾರಿಯ ಕಚೇರಿಯ ಮೇಲೆ‌ ಶನಿವಾರ ಬೆಳಿಗ್ಗೆ ಏಕಕಾಲಕ್ಕೆ ದಾಳಿ ನಡೆಸಲಾಗಿದೆ.

ಎಸಿಬಿ ಬೆಂಗಳೂರು ನಗರ ಎಸ್ ಪಿ ಕುಲದೀಪ್ ಕುಮಾರ್ ಆರ್. ಜೈನ್ ದಾಳಿಯ ನೇತೃತ್ವ ವಹಿಸಿದ್ದಾರೆ.ಕೆಎಎಸ್ ಅಧಿಕಾರಿ ಸುಧಾ‌ ಅವರ ಮನೆಯಲ್ಲಿ ಅಪಾರ ಪ್ರಮಾಣದ ಚಿನ್ನಾಭರಣ, ಟೊಯೋಟಾ ಫಾರ್ಚೂನರ್ ಕಾರು ಪತ್ತೆಯಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.