ಬೆಂಗಳೂರು: ದ್ವಿಚಕ್ರ ವಾಹನಗಳನ್ನು ಕದ್ದು ಆಂಧ್ರಪ್ರದೇಶದಲ್ಲಿ ಮಾರಾಟ ಮಾಡುತ್ತಿದ್ದ ಆರೋಪಿ ಹನುಮಂತ ರೆಡ್ಡಿಯನ್ನು ಬೇಗೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ಆಂಧ್ರಪ್ರದೇಶ ನಿವಾಸಿ ಹನುಮಂತ, ಆಗಾಗ ಬೆಂಗಳೂರಿಗೆ ಬಂದು ದ್ವಿಚಕ್ರ ವಾಹನಗಳನ್ನು ಕದ್ದೊಯ್ಯುತ್ತಿದ್ದ. ಆತನಿಂದ ಲಕ್ಷಾಂತರ ರೂಪಾಯಿ ಮೌಲ್ಯದ 45 ಬೈಕ್ಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಕಳ್ಳತನವನ್ನೇ ವೃತ್ತಿ ಮಾಡಿ ಕೊಂಡಿದ್ದ ಆರೋಪಿ, ಅದರಿಂದ ಬಂದ ಹಣದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದ. ರಾತ್ರಿ ಮಾತ್ರ ಬೆಂಗಳೂರಿಗೆ ಬರುತ್ತಿದ್ದ ಆತ, ಮನೆ ಮುಂದೆ ಹಾಗೂ ಸಾರ್ವಜನಿಕ ಸ್ಥಳದಲ್ಲಿ ನಿಲ್ಲಿಸುತ್ತಿದ್ದ ವಾಹನಗಳನ್ನು ಕದ್ದು ವಾಪಸು ಊರಿಗೆ ಹೋಗುತ್ತಿದ್ದ. ಸಂಬಂಧಿಕರ ವಾಹನವೆಂದು ಹೇಳಿ ಸ್ಥಳೀಯರಿಗೆ ಮಾರುತ್ತಿದ್ದ.’
‘ವಾಹನಗಳ ದಾಖಲೆ ನೀಡುವಂತೆ ಸ್ಥಳೀಯರು ಕೇಳುತ್ತಿದ್ದರು. ಕೆಲದಿನ ಬಿಟ್ಟು ದಾಖಲೆ ನೀಡುವುದಾಗಿ ಹೇಳುತ್ತಿದ್ದ ಆರೋಪಿ, ಆ ನಂತರ ಸ್ಥಳೀಯರಿಂದ ತಪ್ಪಿಸಿಕೊಂಡು ಓಡಾ ಡುತ್ತಿದ್ದ. ಆರೋಪಿಯನ್ನು ಬಂಧಿಸು ತ್ತಿದ್ದಂತೆ ಸ್ಥಳೀಯರ ಬಳಿ ಹೋಗಿ ವಾಹನಗಳನ್ನು ಜಪ್ತಿ ಮಾಡಿಕೊಂಡು ಬರಲಾಗಿದೆ. ಅವರಿಂದಲೂ ಹೇಳಿಕೆ ಪಡೆಯಲಾಗಿದೆ.’
‘ಬೇಗೂರು, ಮಡಿವಾಳ, ಎಲೆ ಕ್ಟ್ರಾನಿಕ್ ಸಿಟಿ, ಬೊಮ್ಮನಹಳ್ಳಿ, ಬಂಡೇ ಪಾಳ್ಯ, ಮಾರತ್ತಹಳ್ಳಿ, ಪುಟ್ಟೇನಹಳ್ಳಿ, ಸುಬ್ರಮಣ್ಯಪುರ, ಹೆಬ್ಬಗೋಡಿ, ಕುಂಬಳಗೋಡು, ವರ್ತೂರು ಠಾಣೆ ವ್ಯಾಪ್ತಿಯಲ್ಲಿ ಆರೋಪಿ ಕೃತ್ಯ ಎಸಗಿದ್ದ. ಈತನ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿತ್ತು’ ಎಂದು ಹೇಳಿದರು.
‘ಬೈಕ್ ಕದ್ದೊಯ್ಯುತ್ತಿದ್ದ ದೃಶ್ಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ವಿಳಾಸ ಪತ್ತೆ ಮಾಡಿ ಆಂಧ್ರಪ್ರದೇಶಕ್ಕೆ ಹೋಗಿದ್ದ ವಿಶೇಷ ತಂಡ, ಆರೋಪಿಯನ್ನು ಬಂಧಿಸಲಾಗಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.