ಬೆಂಗಳೂರು: ಅಂಗಡಿಯಲ್ಲಿ ಮಾಡಿದ್ದ ಸಾಲ ನೀಡುವಂತೆ ಕೇಳಿದ್ದಕ್ಕೆ ಮಾಲೀಕ ಹಾಗೂ ಅವರ ಪತ್ನಿ, ಪುತ್ರನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದ ಆರೋಪಿ ಸಲ್ಮಾನ್ ಟಿಪ್ಪು ಎಂಬಾತನನ್ನು ಕೆಂಗೇರಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಸಹಚರರು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಶಿವಕುಮಾರ್ ಅವರು ಕೆಂಗೇರಿ ಉಪ ನಗರದಲ್ಲಿ ಚೌಡೇಶ್ವರಿ ಕಾಂಡಿಮೆಂಟ್ಸ್ ನಡೆಸುತ್ತಿದ್ದರು. ಅವರ ಮೇಲೆ ಟಿಪ್ಪು ಹಾಗೂ ಜತೆಗಿದ್ದವರು ಹಲ್ಲೆ ನಡೆಸಿದ್ದರು.
‘ನಿತ್ಯ ಅಂಗಡಿಗೆ ಬರುತ್ತಿದ್ದ ಟಿಪ್ಪು, ಟೀ ಹಾಗೂ ಸಿಗರೇಟ್ ಅನ್ನು ಸಾಲದ ರೂಪದಲ್ಲಿ ಪಡೆದುಕೊಳ್ಳುತ್ತಿದ್ದ. ಜ.10ರಂದು ಅಂಗಡಿಗೆ ಟಿಪ್ಪು ಬಂದಾಗ ಹಿಂದಿನ ಸಾಲ ₹ 950 ಅನ್ನು ನೀಡುವಂತೆ ಮನವಿ ಮಾಡಿದ್ದೆ. ಆಗ ನನ್ನ ಹತ್ತಿರವೇ ಸಾಲ ಕೇಳುತ್ತೀಯಾ ಎಂದು ಬೆದರಿಸಿ ಅಲ್ಲಿಂದ ತೆರಳಿದ್ದ. ಅಂದು ಸಂಜೆ ಮೂವರು ಸಹಚರರ ಜತೆಗೆ ಬಂದ ಟಿಪ್ಪು ಮತ್ತೆ ಟೀ ಕೊಡುವಂತೆ ಕೇಳಿದ. ಆಗಲೂ ಮತ್ತೊಮ್ಮೆ ಹಿಂದಿನ ಸಾಲ ಮರು ಪಾವತಿ ಮಾಡುವಂತೆ ಕೇಳಿದೆ. ಆಗ ಅಂಗಡಿಯಲ್ಲಿದ್ದ ಜಗ್ನಿಂದ ಹಲ್ಲೆ ನಡೆಸಿದ್ದ. ಪತ್ನಿ ಹಾಗೂ ಪುತ್ರನ ಮೇಲೂ ಹಲ್ಲೆ ನಡೆಸಿದ್ದ’ ಎಂದು ಶಿವಕುಮಾರ್ ದೂರಿನಲ್ಲಿ ಉಲ್ಲೇಖಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.