ADVERTISEMENT

ಮಹಿಳಾ ಕಂಡಕ್ಟರ್ ಮೇಲೆ ಆ್ಯಸಿಡ್ ದಾಳಿ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2019, 20:25 IST
Last Updated 19 ಡಿಸೆಂಬರ್ 2019, 20:25 IST

ಬೆಂಗಳೂರು: ಕರ್ತವ್ಯನಿರತ ‌ಬಿಎಂಟಿಸಿ ಬಸ್ ಮಹಿಳಾ ಕಂಡಕ್ಟರ್ ಮೇಲೆ ಇಬ್ಬರು ದುಷ್ಕರ್ಮಿಗಳು ಬಾಗಲಗುಂಟೆ ವೃತ್ತದ ಬಳಿ ಆ್ಯಸಿಡ್ ದಾಳಿ ಮಾಡಿರುವ ಘಟನೆ ‌ಗುರುವಾರ ಬೆಳಿಗ್ಗೆ ನಡೆದಿದೆ.

ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಬಿಎಂಟಿಸಿ ಬಸ್
ಮಹಿಳಾ ಕಂಡಕ್ಟರ್ ಇಂದಿರಾಬಾಯಿ ಎಂಬುವರ ಮೇಲೆ ಬೆಳಿಗ್ಗೆ 6 ಗಂಟೆಗೆ ಆ್ಯಸಿಡ್ ದಾಳಿ ಮಾಡಿ ಪರಾರಿಯಾಗಿದ್ದಾರೆ. ಪೊಲೀಸರು ಘಟನೆಗೆ ಸಂಬಂಧಿಸಿ ಬಿಎಂಟಿಸಿ ಬಸ್‌ ಚಾಲಕರಾದ ಅರುಣ್‌ ನಾಯಕ ಮತ್ತು ಕುಮಾರ್‌ ನಾಯಕ ಅವರನ್ನು ವಶಕ್ಕೆ ಪಡೆದರು.

ಆ್ಯಸಿಡ್ ದಾಳಿಯಿಂದ ತೀವ್ರವಾಗಿ ಗಾಯಗೊಂಡ ಇಂದಿರಾಬಾಯಿ ಅವರನ್ನು ತಕ್ಷಣ ಹತ್ತಿರದ ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆಕೊಡಿಸಲಾಗಿದೆ. ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಸೌಂದರ್ಯ ಕಾಲೇಜು ಬಳಿ ಇರುವ ಇಂದಿರಾಬಾಯಿ ಮನೆಯ ಸಮೀಪ ಕೃತ್ಯ
ನಡೆದಿದೆ. ಕೆಲಸಕ್ಕೆಂದು ಹೋಗುವಾಗ ಆರೋಪಿಗಳು ಮುಖ ಹಾಗೂ ಎದೆ ಭಾಗಕ್ಕೆ ಆ್ಯಸಿಡ್ ಎರಚಿದ್ದಾರೆ.

ADVERTISEMENT

ಆರು ತಿಂಗಳ ಹಿಂದೆ ಇಂದಿರಾಬಾಯಿ ಅವರನ್ನು ಕಾರು ಹತ್ತಿಸಿ ಕೊಲೆ ಮಾಡಲು ಯತ್ನ ನಡೆದಿತ್ತು. ಆದರೆ, ಅದು ಅಕಸ್ಮಿಕ ಅಪಘಾತ ಎಂದು ತಿಳಿದುಕೊಂಡಿದ್ದ ಅವರು ಯಾವುದೇ ದೂರು ನೀಡಿರಲಿಲ್ಲ ಎಂದು ಮೂಲಗಳು ಹೇಳಿವೆ.

ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉತ್ತರ ವಿಭಾಗದ ಡಿಸಿಪಿ ಶಶಿ
ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.