ಹೆಸರಘಟ್ಟ: ಚಿಕ್ಕಬಾಣಾವರ ಗ್ರಾಮದ ಹೆಸರಘಟ್ಟ ಮುಖ್ಯರಸ್ತೆಯಲ್ಲಿ ಮಾಂಸದ ಅಂಗಡಿಗಳು ಹಿಂಬಾಗಿಲಿನಿಂದ ಮಾಂಸ ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದ ಪಂಚಾಯಿತಿ ಅಧಿಕಾರಿಗಳು ಸೋಲದೇವನಹಳ್ಳಿ ಪೊಲೀಸರ ನೆರವಿನೊಂದಿಗೆ ಮಿಂಚಿನ ಕಾರ್ಯಚರಣೆ ನಡೆಸಿದರು.
ಗುರುವಾರ ಬೆಳಿಗ್ಗೆ ಹತ್ತು ಗಂಟೆಯ ಸುಮಾರಿಗೆ ಹೆಸರಘಟ್ಟ ಮುಖ್ಯರಸ್ತೆಯಲ್ಲಿದ್ದ ಎರಡು ಮಾಂಸದಂಗಡಿಗಳ ಹಿಂದೆ ಜನರು ಸರತಿ ಸಾಲಿನಲ್ಲಿ ನಿಂತಿದ್ದರು. ಕೆಲವರು ಮುಖಗಳಿಗೆ ಮಾಸ್ಕ್ ಧರಿಸಿದ್ದರೆ ಮತ್ತೆ ಕೆಲವರು ಯಾವುದೇ ಮುಂಜಾಗರೂಕತೆ ಕ್ರಮಗಳನ್ನು ಅನುಸರಿಸದೆ ಬಂದು ಸಾಲಿನಲ್ಲಿ ನಿಂತಿದ್ದರು. ವಿಷಯ ತಿಳಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿದ್ಯಾ ಅವರು ಸೋಲದೇವನಹಳ್ಳಿ ಪೊಲೀಸರೊಂದಿಗೆ ಸ್ಥಳಕ್ಕೆ ಬಂದರು. ಹಬ್ಬವಾಗಿರುವುದರಿಂದ ಮಾಂಸ ಕೊಳ್ಳಲು ಅವಕಾಶ ಮಾಡಿಕೊಡಬೇಕು ಎಂದು ಕೆಲವು ಗ್ರಾಮಸ್ಥರು ಕೇಳಿದರು. ಆದರೆ, ಲಾಕ್ ಡೌನ್ ಆದೇಶ ಇರುವುದರಿಂದ ಅವಕಾಶ ಮಾಡಿಕೊಡಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿ, ಜನರನ್ನು ವಾಪಸ್ ಕಳುಹಿಸಿದರು. ಪೊಲೀಸರ ಕಣ್ಣು ತಪ್ಪಿಸಿ ಮಾಂಸ ಮಾರುತ್ತಿದ್ದ ಮಾಲೀಕರನ್ನು ವಶಕ್ಕೆ ಪಡೆದರು.
ಆಶೋಕ ಚಿತ್ರ ಮಂದಿರದ ಬಳಿ ಸುಮಾರು ಇಪ್ಪತ್ತು ಜನರ ಗುಂಪು ಕಟ್ಟಿಕೊಂಡು ಮಾಂಸ ಮಾರಾಟ ಮಾಡುತ್ತಿದ್ದ ಮಾಲೀಕನ ಮೇಲೆ ಸೋಲದೇವನಹಳ್ಳಿ ಪೊಲೀಸರು ಮಿಂಚಿನ ದಾಳಿ ನಡೆಸಿದರು. ಪೊಲೀಸರನ್ನು ನೋಡುತ್ತಿದ್ದಂತೆ ಜನರು ಓಡಿ ಹೋದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.