ಬೆಂಗಳೂರು: ‘ನಗರದಲ್ಲಿ ಡಿಸೈನ್(ವಿನ್ಯಾಸ) ಕಾಲೇಜು ತೆರೆಯಲು ಕ್ರಮ ಕೈಗೊಳ್ಳಲಾಗುವುದು’ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದರು.
ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಚಿತ್ರಕಲಾ ಸಮ್ಮಾನ್ ಮತ್ತು ಪ್ರೊ. ಎಂ.ಎಸ್. ನಂಜುಂಡರಾವ್ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ‘ನಗರದಲ್ಲಿ ಈವರೆಗೂ ಡಿಸೈನ್ ಕಾಲೇಜು ಸ್ಥಾಪಿಸಿಲ್ಲ ಎಂಬುದೇ ಆಶ್ಚರ್ಯ. ಎಷ್ಟೋ ವರ್ಷಗಳ ಹಿಂದೆ
ಯೇ ಆಗಬೇಕಿದ್ದ ಕೆಲಸ ಇದು. ಈ ಬಗ್ಗೆ ರೂಪುರೇಷೆ ಸಿದ್ಧಪಡಿಸುವ ಸಂಬಂಧ ಚರ್ಚೆ ನಡೆಸಿದ್ದೇನೆ’ ಎಂದು ಹೇಳಿದರು.
‘ಸದ್ಯ ನೀಡುತ್ತಿರುವ ಶಿಕ್ಷಣವು ವಿದ್ಯಾರ್ಥಿಗಳ ಬದುಕು ರೂಪಿಸಿಕೊಳ್ಳಲು ಪೂರಕವಾಗಿಲ್ಲ. ಕಲಿಕಾ ವಿಧಾನವನ್ನು ಬದಲಿಸುವ ಕೆಲಸ ಆಗಬೇಕಿದೆ’ ಎಂದರು.
‘ಚಿತ್ರಕಲಾ ಪರಿಷತ್ತು ಪ್ರತಿವರ್ಷ ಆಯೋಜಿಸುವ ಚಿತ್ರಸಂತೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಬೇರೆ ದೇಶಗಳಲ್ಲಿ ನಡೆಯುವ ಚಿತ್ರಸಂತೆಗೆ ಅಲ್ಲಿನ ಜನಸಂಖ್ಯೆಗಿಂತ ಐದು ಪಟ್ಟು ಹೆಚ್ಚಿನ ಕಲಾಸಕ್ತರು ಭಾಗವಹಿಸುತ್ತಾರೆ. ಆ ರೀತಿಯ ವಾತಾವರಣ ಇಲ್ಲಿಯೂ ಸೃಷ್ಟಿಯಾಗಬೇಕಿದೆ’ ಎಂದು ಅವರು ಅಭಿಪ್ರಾಯಪಟ್ಟರು. ರುಮಾಲೆ ಚೆನ್ನಬಸವಯ್ಯರ ನೆನಪಿನಲ್ಲಿ ಆಯೋಜಿಸಿದ್ದ ‘ಬೆಂಗಳೂರು ಲ್ಯಾಂಡ್ಸ್ಕೇಪ್’ ಚಿತ್ರ ಪ್ರದರ್ಶನವನ್ನು ಖ್ಯಾತ ಕಲಾವಿದ ಪ್ರೊ.ಪ್ರಭಾಕರ್ ಕೊಲ್ಟೆ ಉದ್ಘಾಟಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.