ಬೆಂಗಳೂರು:ನಗರ ಕೇಂದ್ರ ವಿಭಾಗದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳುಗುರುವಾರ ನಿಯಮ ಉಲ್ಲಂಘಿಸಿದ 22 ಶಾಲಾ ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
‘ಶಾಲಾ ವಾಹನಗಳ ತಪಾಸಣೆಗಾಗಿ ತಂಡಗಳನ್ನು ರಚನೆ ಮಾಡಲಾಗಿತ್ತು. ಕೇಂದ್ರ ವಿಭಾಗದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಶಾಲೆಗಳ ಬಳಿ ಕಾರ್ಯಾಚರಣೆ ನಡೆಸಿದ ತಂಡ, ಸುಮಾರು 80 ವಾಹನಗಳ ತಪಾಸಣೆ ನಡೆಸಿದೆ’ ಎಂದು ಜಂಟಿ ಸಾರಿಗೆ ಆಯುಕ್ತ ಕೆ.ಟಿ.ಹಾಲಸ್ವಾಮಿ ವಿವರಿಸಿದರು.
‘ಪ್ರಥಮ ಚಿಕಿತ್ಸೆಯ ಕಿಟ್ ಇಲ್ಲದಿರುವುದು, ಹೆಚ್ಚುವರಿ ಸೀಟುಗಳನ್ನು ಅಳವಡಿಸಿಕೊಂಡಿರುವುದು, ಹೆಚ್ಚು ಮಕ್ಕಳಿಗೆ ಜಾಗವಾಗುವಂತೆ ವಾಹನವನ್ನು ಬದಲಾಯಿಸಿರುವುದು, ಪರವಾನಗಿ ಇಲ್ಲದಿರುವುದು ಸೇರಿದಂತೆ ಹಲವು ಲೋಪಗಳು ತಪಾಸಣೆ ವೇಳೆಯಲ್ಲಿ ಕಂಡುಬಂದಿವೆ’ ಎಂದು ಅವರು ತಿಳಿಸಿದರು.
ಫೇಸ್ಬುಕ್ನಲ್ಲಿ ಕಿರುಕುಳ: ನಟ ದರ್ಶನ್ ಪತ್ನಿ ದೂರು
ಬೆಂಗಳೂರು: ‘ಫೇಸ್ಬುಕ್ನಲ್ಲಿ ನನ್ನ ಹೆಸರು ಹಾಗೂ ಫೋಟೊ ದುರ್ಬಳಕೆ ಮಾಡಿಕೊಂಡಿರುವ ಕಿಡಿಗೇಡಿಯೊಬ್ಬ, ಅಶ್ಲೀಲ ಪದಗಳನ್ನು ಬಳಸಿ ನನ್ನ ಗೌರವಕ್ಕೆ ಧಕ್ಕೆ ಉಂಟು ಮಾಡಿದ್ದಾನೆ’ ಎಂದು ಆರೋಪಿಸಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಸೈಬರ್ ಕ್ರೈಂ ಠಾಣೆಗೆ ಆ.20ರಂದು ದೂರು ಕೊಟ್ಟಿದ್ದಾರೆ.
‘ನಕಲಿ ಖಾತೆ ತೆರೆದಿರುವ ಆರೋಪಿ, ಅದು ಅಸಲಿ ಎಂದು ಬಿಂಬಿಸಲು ನನ್ನ ಹಾಗೂ ನನ್ನ ಕುಟುಂಬ ಸದಸ್ಯರ ಫೋಟೊಗಳನ್ನು ಅಪ್ಲೋಡ್ ಮಾಡಿದ್ದಾನೆ. ಆ.18ರ ಮಧ್ಯಾಹ್ನ 12.28ಕ್ಕೆ ನನ್ನ ಫೋಟೊ ಹಾಕಿ, ‘ಮೈ ಲೈಫ್’ ಎಂದು ಬರೆದುಕೊಂಡಿದ್ದಾನೆ. ಅಲ್ಲದೆ, ಕೀಳುಮಟ್ಟದ ಪದ ಪ್ರಯೋಗ ಮಾಡುವ ಮೂಲಕ ಸಾರ್ವಜನಿಕ ವಲಯದಲ್ಲಿ ಮಹಿಳೆಯ ಘನತೆಗೆ ಕುಂದು ಉಂಟು ಮಾಡಿದ್ದಾನೆ’ ಎಂದು ಅವರು ದೂರಿದ್ದಾರೆ.
‘ಹಲವು ದಿನಗಳಿಂದ ಇದೇ ರೀತಿ ಕಿರುಕುಳ ನೀಡುತ್ತಿದ್ದಾನೆ. ಆತನ ಪೋಸ್ಟ್ಗಳಿಗೆ ಇತರರೂ ಕೆಟ್ಟ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಹೀಗಾಗಿ, ಆದಷ್ಟು ಬೇಗ ಆರೋಪಿಯನ್ನು ಪತ್ತೆ ಮಾಡಿ ಸೂಕ್ತ ಕ್ರಮ ಜರುಗಿಸಬೇಕು’ ಎಂದು ವಿಜಯಲಕ್ಷ್ಮಿ ಮನವಿ ಮಾಡಿದ್ದಾರೆ.
ಪೊಲೀಸರು ಐಪಿ ವಿಳಾಸ ಆಧರಿಸಿ ಆತನ ಬಂಧನಕ್ಕೆ ಬಲೆ ಬೀಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.