ಬೆಂಗಳೂರು: ಕುಮಾರಸ್ವಾಮಿ ಲೇಔಟ್ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ನಟ ನಾಗಭೂಷಣ ಕಾರು ಅಪಘಾತವಾಗಿದ್ದು, ಪಾದಚಾರಿ ಎಸ್.ಪ್ರೇಮಾ (48) ಅವರು ಮೃತಪಟ್ಟಿದ್ದಾರೆ.
'ಉತ್ತರಹಳ್ಳಿಯ ವಸಂತಪುರ ಮುಖ್ಯರಸ್ತೆ ನಿವಾಸಿ ಪ್ರೇಮಾ, ಪತಿ ಬಿ. ಕೃಷ್ಣ (58) ಜೊತೆ ನಡೆದುಕೊಂಡು ಹೊರಟಿದ್ದರು. ಇದೇ ವೇಳೆ ನಾಗಭೂಷಣ ಕಾರು ಅತೀ ವೇಗದಲ್ಲಿ ಬಂದು ದಂಪತಿಗೆ ಗುದ್ದಿದೆ. ನಂತರ, ಅದೇ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ' ಎಂದು ಪೊಲೀಸರು ಹೇಳಿದರು.
'ತೀವ್ರ ಗಾಯಗೊಂಡು ಪ್ರೇಮಾ ಮೃತಪಟ್ಟಿದ್ದಾರೆ. ಕೃಷ್ಣ ಅವರಿಗೂ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.'
'ನಾಗಭೂಷಣ ಅವರು ಶನಿವಾರ ರಾತ್ರಿ ತಮ್ಮ ಕಿಯಾ ಕಾರಿನಲ್ಲಿ (ಕೆಎ 09 ಎಂಜಿ 5335) ವಸಂತಪುರ ಮುಖ್ಯ ರಸ್ತೆಯಲ್ಲಿ ತೆರಳುತ್ತಿದ್ದರು. ಅತೀ ವೇಗ ಹಾಗೂ ನಿರ್ಲಕ್ಷ್ಯದಿಂದ ನಾಗಭೂಷಣ ಕಾರು ಚಲಾಯಿಸಿದ್ದರು. ಇದರಿಂದಲೇ ಅಪಘಾತ ಆಗಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ' ಎಂದು ಪೊಲೀಸರು ತಿಳಿಸಿದರು.
'ಮೃತ ಪ್ರೇಮಾ ಅವರ ಸಂಬಂಧಿಕರು ದೂರು ನೀಡಿದ್ದಾರೆ. ನಾಗಭೂಷಣ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕಾರು ಜಪ್ತಿ ಮಾಡಲಾಗಿದೆ. ನಾಗಭೂಷಣ ಅವರನ್ನು ವಶಕ್ಕೆ ಪಡೆಯಲಾಗಿದೆ' ಎಂದರು.
ಪರಾರಿಯಾಗಲು ಯತ್ನಿಸಿದ್ದ ನಟ ನಾಗಭೂಷಣ!
ಅಪಘಾತದ ಬಳಿಕ ಪರಾರಿಯಾಗಲು ಯತ್ನಿಸಿದ್ದ ನಟ ನಾಗಭೂಷಣ ಅವರನ್ನು ಸ್ಥಳೀಯರೇ ತಡೆದು ನಿಲ್ಲಿಸಿ, ಪೊಲೀಸರ ಹೊಯ್ಸಳ ವಾಹನದಲ್ಲಿ ಹತ್ತಿಸಿ ಕಳುಹಿಸಿದ್ದಾರೆ.
'ನಾಗಭೂಷಣ ಅತೀ ವೇಗವಾಗಿ ಕಾರು ಚಲಾಯಿಸಿದ್ದ. ದಂಪತಿ ಪಾದಚಾರಿ ಮಾರ್ಗದಲ್ಲಿ ನಡೆದುಕೊಂಡು ಹೊರಟಿದ್ದರು. ಅವರಿಗೆ ಮೊದಲು ಕಾರು ಗುದ್ದಿತ್ತು. ನಂತರ, ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿತ್ತು' ಎಂದು ಸ್ಥಳೀಯರು ತಿಳಿಸಿದ್ದಾರೆ.
'ಅಪಘಾತದ ಬಳಿಕ ಕಾರು ಸ್ಥಳದಲ್ಲೇ ಬಿಟ್ಟು ನಾಗಭೂಷಣ ಪರಾರಿಯಾಗಲು ಯತ್ನಿಸಿದ್ದ. ಆತನನ್ನು ತಡೆದು ನಿಲ್ಲಿಸಿದ್ದೆವು. ಆತ, ಕಪ್ಪು ಜರ್ಕಿನ್ ಹಾಕಿಕೊಂಡಿದ್ದ. ಜನರು ಹೆಚ್ಚು ಸೇರುತ್ತಿದ್ದಂತೆ ಆತ ಮಾಸ್ಕ್ ಹಾಕಿಕೊಂಡ. ನಂತರ, ಹೊಯ್ಸಳ ವಾಹನ ಸ್ಥಳಕ್ಕೆ ಬಂತು. ಆತನನ್ನು ವಾಹನದಲ್ಲಿ ಕೂರಿಸಿ ಠಾಣೆಗೆ ಕಳುಹಿಸಿದೆವು' ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.