ಬೆಂಗಳೂರು: ಚಿತ್ರನಟ ಯಶ್ ಕುಟುಂಬ ನಗರದ ಬನಶಂಕರಿ ಮೂರನೇ ಹಂತದ ಮೂರನೇ ಬ್ಲಾಕ್ನ 6ನೇ ಕ್ರಾಸ್ಲ್ಲಿ ವಾಸವಿದ್ದ ಬಾಡಿಗೆ ಮನೆಯನ್ನು ಖಾಲಿ ಮಾಡಿದೆ.
ಈ ಕುರಿತಂತೆ ‘ಪ್ರಜಾವಾಣಿ‘ಗೆ ಮಾಹಿತಿ ನೀಡಿದ ಮನೆ ಮಾಲೀಕರ ಪರ ವಕೀಲ ಎಂ.ಟಿ.ನಾಣಯ್ಯ ಅವರು, ‘ಎರಡು ತಿಂಗಳ ಬಾಡಿಗೆ ₹ 80 ಸಾವಿರ ಮೊತ್ತದ ಡಿ.ಡಿ ಹಾಗೂ ಕೀಲಿಯನ್ನು ನಮ್ಮ ಕಿರಿಯ ವಕೀಲರಿಗೆ ಯಶ್ ಕುಟುಂಬದರು ಶುಕ್ರವಾರ ಒಪ್ಪಿಸಿದ್ದಾರೆ’ ಎಂದು ತಿಳಿಸಿದರು.
‘ಮನೆಯ ಕೆಲ ಭಾಗಗಳಿಗೆ ಧಕ್ಕೆ ಉಂಟು ಮಾಡಲಾಗಿದೆ. ಮನೆ ಈಗ ವಾಸಕ್ಕೆ ಯೋಗ್ಯವಲ್ಲದ ರೀತಿಯಲ್ಲಿದೆ. ಈ ಬಗ್ಗೆ ಮಾಲೀಕರು ಯಶ್ ಕುಟುಂಬದ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಿದ್ದಾರೆ’ ಎಂದು ನಾಣಯ್ಯ ವಿವರಿಸಿದರು.
ಮನೆ ಖಾಲಿ ಮಾಡುವ ತಕರಾರಿಗೆ ಸಂಬಂಧಿಸಿದಂತೆ ಅಧೀನ ನ್ಯಾಯಾಲಯದ ಆದೇಶ ಪ್ರಶ್ನಿಸಿ ಯಶ್ ತಾಯಿ ಪುಷ್ಪಾ ಹೈಕೋರ್ಟ್ ಮೆಟ್ಟಿಲೇರಿದ್ದರು.
ಬಾಕಿ ಪಾವತಿ: 2018ರ ಸೆಪ್ಟೆಂಬರ್ 5ರಂದು ಆದೇಶ ನೀಡಿದ್ದ ಹೈಕೋರ್ಟ್, ‘ಪುಷ್ಪಾ ಅವರು ಮನೆ ಮಾಲೀಕರಿಗೆ ತಕ್ಷಣವೇ ಬಾಡಿಗೆಯ ಬಾಕಿಯನ್ನು ಬಡ್ಡಿಸಹಿತ ಪಾವತಿಸಿದರೆ 2019ರ ಮಾರ್ಚ್ 31ರವರೆಗೆ ವಾಸ ಮುಂದುವರಿಸಬಹುದು. ಒಂದೊಮ್ಮೆ ಹಣ ಪಾವತಿಸುವುದು ವಿಳಂಬವಾದರೆ, 2018ರ ಡಿಸೆಂಬರ್ 31ರೊಳಗೆ ಮನೆ ಖಾಲಿ ಮಾಡಿಕೊಡಬೇಕು’ ಎಂದು ತಿಳಿಸಿತ್ತು.
ಈ ಆದೇಶದ ಅನ್ವಯ ಪುಷ್ಪಾ ಅವರು ಬಾಡಿಗೆಯ ಬಾಕಿ ₹ 25 ಲಕ್ಷ ಮೊತ್ತವನ್ನು ಹೈಕೋರ್ಟ್ನಲ್ಲಿ ಠೇವಣಿ ಇರಿಸಿದ್ದರು. ‘ಈ ಹಣವನ್ನು ಮಾಲೀಕರಿಗೆ ಬಿಡುಗಡೆ ಮಾಡಿ’ ಎಂದು ನ್ಯಾಯಪೀಠ ವಿಚಾರಣೆ ವೇಳೆ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರಿಗೆ ನಿರ್ದೇಶಿಸಿತ್ತು.
ಏತನ್ಮಧ್ಯೆ ಮನೆ ಖಾಲಿ ಮಾಡಲು ಮತ್ತಷ್ಟು ಸಮಯಾವಕಾಶ ಕೋರಿ ಪುಷ್ಪಾ ಮಧ್ಯಂತರ ಅರ್ಜಿ ಸಲ್ಲಿಸಿ ಅನುಮತಿ ಪಡೆದು ವಾಸ ಮುಂದುವರಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.