
ಬೆಂಗಳೂರು: ಬೆಂಗಳೂರು ಹಾಲು ಒಕ್ಕೂಟದ(ಬಮೂಲ್) ನಂದಿನಿ ಉತ್ಪನ್ನಗಳಿಗೆ ಪ್ರಚಾರ ರಾಯಭಾರಿಯಾಗಿ ನಟಿ ಸುಧಾರಾಣಿ ಅವರನ್ನು ನೇಮಕ ಮಾಡಲಾಗಿದೆ.
‘ರಾಜ್ಕುಮಾರ್, ಶಿವರಾಜ್ಕುಮಾರ್ ಹಾಗೂ ಪುನೀತ್ ರಾಜ್ಕುಮಾರ್ ಅವರಂತಹ ಮೇರು ವ್ಯಕ್ತಿಗಳ ಹಾದಿಯನ್ನು ಅನುಸರಿಸಿ ಬ್ರ್ಯಾಂಡ್ ಅಂಬಾಸಿಡರ್ ಆಗಿರುವುದು ಕೇವಲ ಅನುಕರಣೆಯಲ್ಲ, ಧನ್ಯತೆ ಮತ್ತು ಹೆಮ್ಮೆಯ ಜವಾಬ್ದಾರಿ. ಅವರಂತೆಯೇ ಉಚಿತವಾಗಿ ಪ್ರಚಾರ ಮಾಡಲು ಒಪ್ಪಿಕೊಂಡಿದ್ದೇನೆ’ ಎಂದು ಸುಧಾರಾಣಿ ತಿಳಿಸಿದ್ದಾರೆ.
‘ತಲೆಮಾರುಗಳಿಂದ ಪ್ರತಿಯೊಬ್ಬ ಕನ್ನಡಿಗನ ನಂಬಿಕೆಯ ಪ್ರತೀಕ ನಂದಿನಿ. ರೈತರ ಸಹಕಾರಿ ಸಂಸ್ಥೆಯಾದ ಬಮೂಲ್ ಜತೆ ಒಡಗೂಡುವ ಅವಕಾಶ ನನಗೆ ಅತ್ಯಂತ ಗೌರವದ ವಿಷಯ. ಡಿ.ಕೆ.ಸುರೇಶ್ ಅವರೊಂದಿಗೆ ಬಮೂಲ್ನ ಹೊಸ ಉತ್ಪನ್ನಗಳ ಕುರಿತು ಸಂವಾದ ನಡೆಸಿದೆ. ಮಾರುಕಟ್ಟೆಗೆ ಬರಲಿರುವ ಹೊಸ ಉತ್ಪನ್ನಗಳ ಬಿಡುಗಡೆಯ ಹಿಂದೆ ಇರುವ ದೃಷ್ಟಿಕೋನ ನಿಜಕ್ಕೂ ಪ್ರೇರಣಾದಾಯಕವಾಗಿತ್ತು ಎಂದು ಹೇಳಿದ್ದಾರೆ.
ಸುರೇಶ್ ಸ್ವಾಗತ : ನಂದಿನಿ ಉತ್ಪನ್ನಗಳಿಗೆ ಪ್ರಚಾರ ರಾಯಭಾರಿಯಾಗಿ ಸುಧಾರಾಣಿ ಆಯ್ಕೆಯಾಗಿದ್ದು, ಬಮೂಲ್ ಕುಟುಂಬಕ್ಕೆ ಅವರನ್ನು ಪ್ರೀತಿಯಿಂದ ಸ್ವಾಗತಿಸುತ್ತೇವೆ ಎಂದು ಅಧ್ಯಕ್ಷ ಡಿ.ಕೆ.ಸುರೇಶ್ ಹೇಳಿದ್ದಾರೆ.
ಕೆಎಂಎಫ್ ಆಕ್ಷೇಪ: ‘ಕರ್ನಾಟಕ ಹಾಲು ಮಹಾಮಂಡಳದ(ಕೆಎಂಎಫ್) ಬೈಲಾಗೆ ವಿರುದ್ದವಾಗಿ ಬೆಂಗಳೂರು ಹಾಲು ಒಕ್ಕೂಟ(ಬಮೂಲ್) ರಾಯಭಾರಿಯನ್ನು ನೇಮಕ ಮಾಡಿಕೊಂಡಿದೆ’ ಎನ್ನುವ ಆಕ್ಷೇಪ ವ್ಯಕ್ತವಾಗಿದೆ.
‘ಮಹಾಮಂಡಳದ ಗಮನಕ್ಕೂ ತಾರದೇ ನಂದಿನಿ ಉತ್ಪನ್ನಗಳ ರಾಯಭಾರಿಯನ್ನಾಗಿ ನಟಿ ಸುಧಾರಾಣಿಯನ್ನು ನೇಮಕ ಮಾಡಲಾಗಿದೆ. ಈ ಕುರಿತು ಬಮೂಲ್ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗುವುದು’ ಎಂದು ಕೆಎಂಎಫ್ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.