ಬೆಂಗಳೂರು: ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ ನೀಡುವ 2025ನೇ ಸಾಲಿನ ‘ಆದಿಕವಿ ಪುರಸ್ಕಾರ’ಕ್ಕೆ ಲೇಖಕಿ ಎಲ್.ವಿ. ಶಾಂತಕುಮಾರಿ ಹಾಗೂ ‘ವಾಗ್ದೇವಿ ಪುರಸ್ಕಾರ’ಕ್ಕೆ ಲೇಖಕ ಅರಬಗಟ್ಟೆ ಅಣ್ಣಪ್ಪ ಆಯ್ಕೆಯಾಗಿದ್ದಾರೆ.
ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪರಿಷದ್ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುನಂದನ್ ಭಟ್, ‘ಸಾಮಾಜಿಕ ಕಳಕಳಿ ಹಾಗೂ ರಾಷ್ಟ್ರೀಯ ದೃಷ್ಟಿಕೋನವುಳ್ಳ ಹಿರಿಯ ಸಾಹಿತ್ಯ ಸಾಧಕರಿಗೆ ‘ಆದಿಕವಿ ಪುರಸ್ಕಾರ’ ಮತ್ತು ಕಿರಿಯ ಸಾಹಿತ್ಯ ಸಾಧಕರಿಗೆ ‘ವಾಗ್ದೇವಿ ಪುರಸ್ಕಾರ’ವನ್ನು ಪ್ರತಿ ವರ್ಷ ನೀಡಲಾಗುತ್ತಿದೆ. ಈ ಪ್ರಶಸ್ತಿಗಳು ತಲಾ ₹1 ಲಕ್ಷ ನಗದು ಹಾಗೂ ಫಲಕ ಒಳಗೊಂಡಿವೆ.
ಶಾಂತಕುಮಾರಿ ಅವರು ತಮ್ಮ ಅಧ್ಯಯನ, ಬೋಧನೆ ಮತ್ತು ಕೃತಿಗಳ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಅವರ ಪಾಂಡಿತ್ಯಪೂರ್ಣ ಸಾಹಿತ್ಯ ಸಾಧನೆಯು ಹೊಸ ಪೀಳಿಗೆಗೆ ಪ್ರೇರಣೆಯ ದಾರಿದೀಪವಾಗಿದೆ’ ಎಂದು ಹೇಳಿದರು.
‘ದಾವಣಗೆರೆ ಜಿಲ್ಲೆಯ ಅರಬಗಟ್ಟೆ ಅಣ್ಣಪ್ಪ ಅವರು, ಸದ್ಯ ತೀರ್ಥಹಳ್ಳಿ ತಾಲ್ಲೂಕಿನ ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಬರವಣಿಗೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಾವಿರಕ್ಕೂ ಹೆಚ್ಚು ಕವನಗಳನ್ನು ರಚಿಸಿದ್ದಾರೆ’ ಎಂದು ತಿಳಿಸಿದರು.
‘ಈ ಪುರಸ್ಕಾರವನ್ನು ಜಿ.ಕೆ. ಗ್ರೂಪ್ ಉದ್ಯಮಿ ಎಸ್. ಜಯರಾಮ್ ಹಾಗೂ ವಾಗ್ದೇವಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಕೆ. ಹರೀಶ್ ಪ್ರಾಯೋಜಿಸಿದ್ದಾರೆ. ಅ.12ರಂದು ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.