ADVERTISEMENT

ಆಧುನಿಕ ಡಯಾಗ್ನೋಸ್ಟಿಕ್ ಕೇಂದ್ರ ಅಗತ್ಯ: ಎಂ.ಆರ್‌.ಸಸೀಂದ್ರನಾಥ್

ಪಶುವೈದ್ಯಕೀಯ ಸಮ್ಮೇಳನದಲ್ಲಿ ಸಸೀಂದ್ರನಾಥ್ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2020, 19:50 IST
Last Updated 5 ಫೆಬ್ರುವರಿ 2020, 19:50 IST
ಡಾ.ಎಂ.ಆರ್.ಸಸೀಂದ್ರನಾಥ್ ಅವರನ್ನು ಸನ್ಮಾನಿಸಲಾಯಿತು. (ಎಡದಿಂದ) ಹೆಬ್ಬಾಳದ ಪಶುವೈದ್ಯಕೀಯ ಕಾಲೇಜಿನ ಡೀನ್ ಪ್ರೊ.ಎಂ.ನಾರಾಯಣ ಭಟ್, ಭಾರತೀಯ ಪಶು ಔಷಧ ಸಂಸ್ಥೆಯ ಅಧ್ಯಕ್ಷ ಡಿ.ಎಸ್.ನೌರಿಯಲ್‌, ಡಾ.ಎಚ್.ಡಿ.ನಾರಾಯಣಸ್ವಾಮಿ, ಪ್ರೊ.ಆರ್.ರಾಮ್ ಪ್ರಭು, ಪ್ರೊ.ಕೆ.ವೆಂಕಟ ರೆಡ್ಡಿ, ಪ್ರೊ.ಶಂಕರೇಗೌಡ ಹಾಗೂ ಪ್ರೊ.ಆರ್.ನರೇಂದ್ರ ಇದ್ದರು –ಪ್ರಜಾವಾಣಿ ಚಿತ್ರ
ಡಾ.ಎಂ.ಆರ್.ಸಸೀಂದ್ರನಾಥ್ ಅವರನ್ನು ಸನ್ಮಾನಿಸಲಾಯಿತು. (ಎಡದಿಂದ) ಹೆಬ್ಬಾಳದ ಪಶುವೈದ್ಯಕೀಯ ಕಾಲೇಜಿನ ಡೀನ್ ಪ್ರೊ.ಎಂ.ನಾರಾಯಣ ಭಟ್, ಭಾರತೀಯ ಪಶು ಔಷಧ ಸಂಸ್ಥೆಯ ಅಧ್ಯಕ್ಷ ಡಿ.ಎಸ್.ನೌರಿಯಲ್‌, ಡಾ.ಎಚ್.ಡಿ.ನಾರಾಯಣಸ್ವಾಮಿ, ಪ್ರೊ.ಆರ್.ರಾಮ್ ಪ್ರಭು, ಪ್ರೊ.ಕೆ.ವೆಂಕಟ ರೆಡ್ಡಿ, ಪ್ರೊ.ಶಂಕರೇಗೌಡ ಹಾಗೂ ಪ್ರೊ.ಆರ್.ನರೇಂದ್ರ ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ದೇಶದ ಬಹುತೇಕ ಪಶು ವೈದ್ಯಕೀಯ ವಿಶ್ವವಿದ್ಯಾಲಯಗಳಲ್ಲಿ ಆಧುನಿಕ ರೋಗನಿರ್ಣಯ (ಡಯಾಗ್ನೋಸ್ಟಿಕ್) ಕೇಂದ್ರಗಳ ಕೊರತೆ ಇದೆ. ಈ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗಮನ ಹರಿಸಬೇಕು’ ಎಂದು ಕೇರಳದಪಶುವೈದ್ಯಕೀಯ ಮತ್ತು ಪ್ರಾಣಿ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಎಂ.ಆರ್‌.ಸಸೀಂದ್ರನಾಥ್ ತಿಳಿಸಿದರು.

ಬೀದರ್‌ನ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ (ಕೆವಿಎಎಫ್‌ಎಸ್‌ಯು) ಹಾಗೂ ಹೆಬ್ಬಾಳದ ಪಶು ವೈದ್ಯಕೀಯ ಕಾಲೇಜು ಸಹಯೋಗದಲ್ಲಿಬುಧವಾರ ಆಯೋಜಿಸಿದ್ದಭಾರತೀಯ ಪಶು ಔಷಧ ಸಂಸ್ಥೆಯ ವಾರ್ಷಿಕ ಸಮ್ಮೇಳನದಲ್ಲಿ ಅವರು ಮಾತನಾಡಿದರು.

‘ಈಚೆಗೆ ಸಂಭವಿಸುತ್ತಿರುವ ಮಾರಕ ಕಾಯಿಲೆಗಳ ಹರಡುವಿಕೆಯಲ್ಲಿಪ್ರಾಣಿಗಳ ಪಾತ್ರವೂ ಇದೆ. ಜಾಗತಿಕ ತಾಪಮಾನ ಹೆಚ್ಚಳದಿಂದ ಹಾಲು, ಮಾಂಸ ಹಾಗೂ ಮೊಟ್ಟೆ ಉತ್ಪಾದನೆಯಲ್ಲಿ ಏರುಪೇರಾಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ADVERTISEMENT

‘ಜನಸಂಖ್ಯೆ ಹೆಚ್ಚುತ್ತಿರುವಂತೆ ಪ್ರಾಣಿಗಳ ಸಂಖ್ಯೆಯೂ ಗಣನೀಯವಾಗಿ ಏರುತ್ತಿದೆ. ಜನರ ಆರೋಗ್ಯ ಸುಧಾರಣೆಗೆ ಕೊಡುವ ಆದ್ಯತೆಯನ್ನು ಪ್ರಾಣಿಗಳಿಗೂ ನೀಡಬೇಕು. ಈ ನಿಟ್ಟಿನಲ್ಲಿ ದೇಶದ ಎಲ್ಲ ಪಶುವೈದ್ಯಕೀಯ ಸಂಸ್ಥೆಗಳು ಗಮನಹರಿಸಬೇಕು’ ಎಂದರು.

ಕೆವಿಎಎಫ್‌ಎಸ್‌ಯು ಕುಲಪತಿ ಎಚ್‌.ಡಿ.ನಾರಾಯಣಸ್ವಾಮಿ,‘ಇತ್ತೀಚೆಗೆ ದಿನಕ್ಕೊಂದು ರೋಗ ಹುಟ್ಟಿಕೊಳ್ಳುತ್ತಿದೆ. ಅವುಗಳನ್ನು ನಿಯಂತ್ರಿಸಲು ಪಶುವೈದ್ಯಕೀಯ ಸಂಸ್ಥೆಗಳು ಸನ್ನದ್ಧವಾಗಿರಬೇಕು. ಇದರಿಂದ ಪಶುವೈದ್ಯಕೀಯ ಸವಾಲಿನ ವೃತ್ತಿಯಾದರೆ, ಪಶುವೈದ್ಯರಿಗೆ ನಿತ್ಯವೂ ಸವಾಲಿನ ದಿನ’ ಎಂದು ಹೇಳಿದರು.

‘ದೇಶದಲ್ಲಿ ರೋಗನಿಯಂತ್ರಣಕ್ಕೆಪಶುವೈದ್ಯಕೀಯ ಕ್ಷೇತ್ರದ ಕೊಡುಗೆ ಅಗಾಧ.ರೋಗಗಳನ್ನು ತಡೆಯಲು ಜಾಗತಿಕವಾಗಿ ಆಧುನಿಕ ಚಿಕಿತ್ಸಾ ವಿಧಾನ ಹಾಗೂ ತಂತ್ರಜ್ಞಾನಗಳು ಬಳಕೆಯಲ್ಲಿವೆ. ಆದರೆ, ಅವುಗಳ ಬಗ್ಗೆ ಇಲ್ಲಿನ ವೈದ್ಯರಿಗೆ ಮಾಹಿತಿ ಕೊರತೆ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.