ADVERTISEMENT

ಹವಾಮಾನ ವೈಪರೀತ್ಯ: ಆಹಾರ ಧಾನ್ಯಗಳ ಉತ್ಪಾದನೆ ಕುಸಿತ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2019, 19:46 IST
Last Updated 2 ಏಪ್ರಿಲ್ 2019, 19:46 IST

ಬೆಂಗಳೂರು: ರಾಜ್ಯದಲ್ಲಿ ಹಲವು ವರ್ಷಗಳಿಂದ ತಾಪಮಾನ ಏರಿಕೆಯಾಗಿದ್ದು, ಇದರಿಂದಾಗಿ ಆಹಾರ ಬೆಳೆಗಳಾದ ಭತ್ತ, ಜೋಳ, ರಾಗಿ ಮತ್ತು ತೊಗರಿ ಇಳುವರಿ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ‘ಆಹಾರ ಬೆಳೆಗಳ ಉತ್ಪಾದಕತೆ ಮತ್ತು ಹವಾಮಾನ ಬದಣಾವಣೆ ಪರಿಣಾಮ’ ಕುರಿತ ಅಧ್ಯಯನ ತಿಳಿಸಿದೆ.

ಡಾ.ಮಧುರ ಸ್ವಾಮಿನಾಥನ್‌ ಅವರ ನೇತೃತ್ವ ತಂಡ ಈ ಅಧ್ಯಯನ ನಡೆಸಿದೆ. ಹವಾಮಾನದ ಪ್ರತಿಕೂಲ ಪರಿಣಾಮದಿಂದಾಗಿ ಮುಂಬರುವ ದಿನಗಳಲ್ಲಿ ಆಹಾರ ಧಾನ್ಯಗಳ ಉತ್ಪಾದನೆ ತೀವ್ರವಾಗಿ ಕುಸಿಯುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.

ಇಂತಹದ್ದೊಂದು ಆಳವಾದ ಅಧ್ಯಯನ ನಡೆಸಿರುವುದು ದಕ್ಷಿಣ ಭಾರತದಲ್ಲೇ ಪ್ರಥಮ. ಈ ಕುರಿತು ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ.ಟಿ.ಎನ್‌.ಪ್ರಕಾಶ್‌ ಕಮ್ಮರಡಿ ಕೃಷಿ ಸಚಿವರಿಗೆ ಪತ್ರ ಬರೆದಿದ್ದು, ವರದಿಯನ್ನು ಗಂಭೀರವಾಗಿ ಪರಿಗಣಿಸಿ, ಭವಿಷ್ಯದಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ADVERTISEMENT

ಕೃಷಿ ಬೆಲೆ ಆಯೋಗವೂ ರಾಜ್ಯದಲ್ಲಿ ದಶಕದಲ್ಲಾದ ಬೆಳೆ ಪರಿವರ್ತನೆ ಬಗ್ಗೆ ಅಧ್ಯಯನ ನಡೆಸಿದೆ. ಆಯೋಗದ ಅಧ್ಯಯನದ ಪ್ರಕಾರ, ರಾಜ್ಯದ ಎರಡು ಪ್ರಮುಖ ಆಹಾರ ಬೆಳೆಗಳಾದ ಭತ್ತ ಮತ್ತು ಜೋಳದ ವಿಸ್ತೀರ್ಣ ಭಾರಿ ಪ್ರಮಾಣದಲ್ಲಿ ಕಡಿಮೆಯಾಗಿದೆ. ಭತ್ತ 18.34 ಲಕ್ಷ ಟನ್‌ ಹಾಗೂ ಜೋಳ 2.88 ಲಕ್ಷ ಟನ್‌ ಉತ್ಪಾದನೆ ಕುಸಿತವಾಗಿದೆ. ಇದರಿಂದ ಆಹಾರ ಭದ್ರತೆ ಮೇಲೆ ತೀವ್ರ ಪರಿಣಾಮ ಉಂಟಾಗಿದೆ ಎಂದು ಪ್ರಕಾಶ್‌ ಕಮ್ಮರಡಿ ತಿಳಿಸಿದ್ದಾರೆ.

ಈ ವಿಚಾರಗಳ ಕುರಿತು ರಾಜ್ಯದ ವಿವಿಧ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯಗಳು ಮತ್ತು ಸಂಶೋಧನಾ ಕೇಂದ್ರಗಳ ಮೂಲಕ ಮುಂದುವರಿದ ಸಂಶೋಧನೆ ನಡೆಸಿ, ಆ ಮೂಲಕ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.