ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಆಯೋಜಿಸಿದ್ದ ‘ಕೃಷಿ ಪರಿಸರದ ಕಡೆಗೆ ನಮ್ಮ ನಡಿಗೆ’ ಮಾರ್ಗದರ್ಶಿ ಪ್ರವಾಸಕ್ಕೆ ಶನಿವಾರ ಚಾಲನೆ ನೀಡಲಾಯಿತು.
ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಎಸ್.ವಿ. ಸುರೇಶ ಮಾತನಾಡಿ, ‘ಕೃಷಿಯ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಈ ಮಾರ್ಗದರ್ಶಿ ನಡೆಗೆ ಆಯೋಜಿಸಲಾಗಿದೆ. ನಗರದ ಒತ್ತಡದ ಬದುಕು, ಸಂಚಾರ ದಟ್ಟಣೆ, ಶಬ್ದ ಮಾಲಿನ್ಯ, ವಾಯು ಮಾಲಿನ್ಯದಂತಹ ಸಮಸ್ಯೆಗಳನ್ನು ಮರೆತು ಈ ಹಸಿರು ಪರಿಸರದಲ್ಲಿ ನಡಿಗೆ ಮಾಡಿದರೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ’ ಎಂದು ಹೇಳಿದರು.
‘ಜಿಕೆವಿಕೆ ಆವರಣದ 5 ಕಿ.ಮೀ ನಡಿಗೆಯಲ್ಲಿ ವೈದ್ಯರು, ಐಟಿ ಉದ್ಯೋಗಿಗಳು, ಗೃಹಿಣಿಯರು, ಮಕ್ಕಳ, ವೃದ್ಧರು ಸೇರಿದಂತೆ 150ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ನಡಿಗೆಯಲ್ಲಿ ಕೃಷಿಗೆ ಸಂಬಂಧಿತ ವಿಷಯಗಳ ಕುರಿತು ಮಾಹಿತಿ ಹಂಚಿಕೊಳ್ಳಲಾಯಿತು. ಜೇನುಕೃಷಿ, ಸಮಗ್ರ ಕೃಷಿ ಪ್ರಾತ್ಯಕ್ಷಿಕೆ, ಬೆಳೆ ಸಂಗ್ರಹಾಲಯ, ಜಾನುವಾರು ಸಂಕೀರ್ಣ, ಹೈಡ್ರೊಫೋನಿಕ್ಸ್ ಘಟಕ, ಜೈವಿಕ ಉದ್ಯಾನಕ್ಕೆ ಭೇಟಿ ನೀಡಲಾಯಿತು’ ಎಂದರು
‘ನಡಿಗೆಯಲ್ಲಿ ಪಾಲ್ಗೊಂಡಿದ್ದ ಎಲ್ಲರಿಗೂ ಸಿರಿಧಾನ್ಯಗಳಿಂದ ತಯಾರಿಸಿದ್ದ ಉಪಾಹಾರ ನೀಡಲಾಯಿತು. ನಡಿಗೆಯ ಜೊತೆಗೆ ರೈತ ಸಂತೆಯು ಆಯೋಜಿಸಲಾಗಿತ್ತು. ರೈತರು ಬೆಳೆದ ವಿವಿಧ ಉತ್ಪನ್ನಗಳು, ಮೌಲ್ಯವರ್ಧಿತ ಉತ್ಪನ್ನಗಳು ಖರೀದಿಸಿದರು. ಮಕ್ಕಳು ಎತ್ತಿನ ಬಂಡಿ ಸವಾರಿ ಮಾಡಿ ಕೃಷಿ ಪಟ್ಟರು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.