ADVERTISEMENT

ಅಗ್ರಿಗೋಲ್ಡ್ ವಂಚನೆ; ಬೃಹತ್ ಸಮಾವೇಶ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2019, 19:17 IST
Last Updated 9 ನವೆಂಬರ್ 2019, 19:17 IST

ಬೆಂಗಳೂರು:‌ ‘ಅಗ್ರಿಗೋಲ್ಡ್‌ ಕಂಪನಿಯಿಂದ ವಂಚನೆಗೀಡಾದವರಿಗೆ ಹಣ ನೀಡಲು ಆಂಧ್ರಪ್ರದೇಶ ಸರ್ಕಾರ ತೀರ್ಮಾನಿಸಿದ್ದು, ಅದೇ ಮಾದರಿಯಲ್ಲೇ ಕರ್ನಾಟಕ ಸರ್ಕಾರವೂ ಹಣ ನೀಡಬೇಕು’ ಎಂದು ಒತ್ತಾಯಿಸಿ ಬೃಹತ್ ಸಮಾವೇಶ ನಡೆಸಲು ರಾಜ್ಯದಲ್ಲಿರುವ ಕಂಪನಿಯ ಏಜೆಂಟರು ಹಾಗೂ ಸಂತ್ರಸ್ತರು ತೀರ್ಮಾನಿಸಿದ್ದಾರೆ.

‘ಬಿಡದಿ ಬಳಿಯ ಬೈರಮಂಗಲದಲ್ಲಿರುವ ಅಗ್ರಿಗೋಲ್ಡ್ ಕಂಪನಿಯ ಜಮೀನಿನಲ್ಲೇ ನ. 17ರಂದು ಸಮಾವೇಶ ನಡೆಸಲಾಗುವುದು. ಈ ಸಂಬಂಧ ರಾಜ್ಯದ ಹಲವು ಜಿಲ್ಲೆಗಳಲ್ಲಿ ಈಗಾಗಲೇ ಪೂರ್ವಭಾವಿ ಸಭೆ ನಡೆಸಲಾಗಿದೆ’ ಎಂದು ಸಂತ್ರಸ್ತರೊಬ್ಬರು ತಿಳಿಸಿದ್ದಾರೆ.

‘ವಂಚನೆ ಪ್ರಕರಣ ಸಂಬಂಧ ಆಂಧ್ರಪ್ರದೇಶದ ಸಿಐಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಕಂಪನಿಗೆ ₹ 10,000 ಕಟ್ಟಿದ್ದರೂ ಅವರಿಗೆಲ್ಲ ಹಣ ನೀಡಲು ಆಂಧ್ರಪ್ರದೇಶ ಸರ್ಕಾರವೇ ತೀರ್ಮಾನಿಸಿದೆ. ಕೆಲ ದಿನಗಳ ಬಳಿಕ ₹20,000 ಪಾವತಿಸಿದವರಿಗೂ ಹಣ ನೀಡುವ ಭರವಸೆಯನ್ನೂ ನೀಡಿದೆ. ಇದಕ್ಕೆ ಅಲ್ಲಿಯ ಸಂತ್ರಸ್ತರ ಹೋರಾಟವೇ ಕಾರಣ. ನಮ್ಮಲ್ಲಿಯೂ ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಲು ಸಮಾವೇಶದ ಮೂಲಕ ಹೋರಾಟ ಆರಂಭಿಸಲಾಗುತ್ತಿದೆ’ ಎಂದು ಹೇಳಿದ್ದಾರೆ.

ADVERTISEMENT

‘ಕಂಪನಿ ವಿರುದ್ಧ ಆಂಧ್ರಪ್ರದೇಶದ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದ ಅಂಡಾಳು ರಮೇಶ್ ಬಾಬು ಅವರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಿಂದಲೂ 5 ಸಾವಿರಕ್ಕೂ ಹೆಚ್ಚು ಏಜೆಂಟರು ಹಾಗೂ ಸಂತ್ರಸ್ತರು ಸಮಾವೇಶಕ್ಕೆ ಬರಲಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.