ಬೆಂಗಳೂರು: ‘ಪೋಷಕರು ತಮ್ಮ ಮಕ್ಕಳಲ್ಲಿ ನೈತಿಕ ಮೌಲ್ಯ ಬೆಳೆಸುವುದು ತುಂಬಾ ಅಗತ್ಯ’ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ತಿಳಿಸಿದರು.
ಪೀಣ್ಯದ ಏಮ್ಸ್ ಇನ್ಸ್ಟಿಟ್ಯೂಟ್ ಆಯೋಜಿಸಿದ್ದ ಪದವಿಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಹಿಂದೆಲ್ಲಾ ಯಾರಾದರೂ ಜೈಲು ಶಿಕ್ಷೆಗೆ ಒಳಗಾದರೆ ಅವರಿಮದ ದೂರ ಉಳಿಯುವಂತೆ ಪೋಷಕರು ಮಕ್ಕಳಿಗೆ ತಿಳಿ ಹೇಳುತ್ತಿದ್ದರು. ಸಾಮಾಜಿಕ ಬಹಿಷ್ಕಾರವೇ ತಪ್ಪಿತಸ್ಥರಿಗೆ ಶಿಕ್ಷೆಯಾಗಿರುತ್ತಿತ್ತು. ಆದರೆ ಈಗ ಪರಿಸ್ಥಿತಿ ಭಿನ್ನವಾಗಿದೆ. ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲಿಗೆ ಹೋಗಿ ಜಾಮೀನಿನ ಮೇಲೆ ಬಿಡುಗಡೆಯಾದವರನ್ನು ಹಾರ, ತುರಾಯಿ ಹಾಕಿ ಭವ್ಯ ಮೆರವಣಿಗೆಯಲ್ಲಿ ಕರೆತರಲಾಗುತ್ತಿದೆ.ಜನರ ಈ ಧೋರಣೆ ಬದಲಾಗಬೇಕು’ ಎಂದರು.
‘ಚುನಾವಣೆಗಳಲ್ಲಿ ಭ್ರಷ್ಟರನ್ನು ಗೆಲ್ಲಿಸುವ ಪರಿಪಾಠ ನಿಲ್ಲಬೇಕು. ಚೀನಾದಲ್ಲಿ ಭ್ರಷ್ಚಾಚಾರ ಕಡಿಮೆಯಾಗಿದೆ. ಆದರೆ ನಮ್ಮ ದೇಶದಲ್ಲಿ ಎಲ್ಲೆಡೆಯೂ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ನೈತಿಕ ಮೌಲ್ಯಗಳು ಅಧಃಪತನಗೊಳ್ಳುತ್ತಿವೆ’ ಎಂದು ಬೇಸರ ವ್ಯಕ್ತಪಡಿಸಿದರು.
ಏಮ್ಸ್ ಕಾಲೇಜಿನ ಸಂಸ್ಥಾಪಕ ಹಾಗೂ ಪ್ರಾಂಶುಪಾಲ ಕಿರಣ್ ಜಿ.ರೆಡ್ಡಿ, ಕುಲಸಚಿವ ಜಯಪ್ರಕಾಶ್ ರೆಡ್ಡಿ, ಪದವಿ ವಿಭಾಗದ ಪ್ರಾಂಶುಪಾಲ ಬಿ.ಎಂ.ರಾಮಮೂರ್ತಿ, ಪ್ರೊ.ಅನುರಾಧ, ಪ್ರೊ.ರಾಜಶೇಖರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.