ಬೆಂಗಳೂರು: ನಗರದಲ್ಲಿ ಸೋಮವಾರ ನಸುಕಿನಲ್ಲಿ ದಟ್ಟ ಮಂಜು ಆವರಿಸಿದ್ದರಿಂದಾಗಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 60 ವಿಮಾನಗಳ ಕಾರ್ಯಾಚರಣೆಯನ್ನು ಕೆಲವು ಗಂಟೆಗಳವರೆಗೆ ಬಂದ್ ಮಾಡಲಾಗಿತ್ತು.
ನಿಲ್ದಾಣದಿಂದ ಹೊರಡಬೇಕಿದ್ದ 45 ವಿಮಾನಗಳು, ಹಾರಾಟ ನಡೆಸಲಿಲ್ಲ. ನಿಗದಿತ ಸಮಯಕ್ಕೆ ನಿಲ್ದಾಣಕ್ಕೆ ಬಂದಿಳಿಯಬೇಕಿದ್ದ 15 ವಿಮಾನಗಳ ಮಾರ್ಗವನ್ನು ಬದಲಾವಣೆ ಮಾಡಿ ಬೇರೆ ನಿಲ್ದಾಣಕ್ಕೆ ಕಳುಹಿಸಲಾಯಿತು.
‘ನಸುಕಿನ 1.30 ಗಂಟೆಯಿಂದಲೇ ನಿಲ್ದಾಣ ಹಾಗೂ ಸುತ್ತಮುತ್ತ ದಟ್ಟ ಮಂಜು ಮುಸುಕಿದ ವಾತಾವರಣವಿತ್ತು. ಅದನ್ನು ಗಮನಿಸಿದ ವಿಮಾನ ಸಂಚಾರ ನಿಯಂತ್ರಣ (ಏರ್ ಟ್ರಾಫಿಕ್ ಕಂಟ್ರೋಲ್) ಅಧಿಕಾರಿಗಳು, ಕೆಲವು ವಿಮಾನಗಳ ಹಾರಾಟದ ಮಿತಿಯನ್ನು ಕಡಿಮೆ ಮಾಡುವಂತೆ ಸೂಚಿಸಿದರು. ಅದಾಗಿ ಕೆಲವು ಗಂಟೆಗಳ ನಂತರ, ವಿಮಾನಗಳ ಹಾರಾಟ ಬಂದ್ ಮಾಡುವಂತೆ ಹೇಳಿದರು. ಬೆಳಿಗ್ಗೆ 9.30 ಗಂಟೆ ನಂತರ ಮಂಜು ಕಡಿಮೆಯಾದ ಬಳಿಕವೇ ವಿಮಾನಗಳ ಹಾರಾಟ ಪುನಃ ಆರಂಭವಾಯಿತು’ ಎಂದು ನಿಲ್ದಾಣದ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.