ಬೆಂಗಳೂರು: ದೇಶದಲ್ಲಿ ರೈಲ್ವೆ ಖಾಸಗೀಕರಣ ನಿಲ್ಲಿಸುವಂತೆ ಆಗ್ರಹಿಸಿ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ನ (ಎಐಯುಟಿಯುಸಿ) ಬೆಂಗಳೂರು ನಗರ ಜಿಲ್ಲಾ ಸಮಿತಿ ವತಿಯಿಂದ 'ರೈಲ್ವೆ ಉಳಿಸಿ ದಿನ'ವನ್ನು ಶುಕ್ರವಾರ ಹಮ್ಮಿಕೊಳ್ಳಲಾಯಿತು.
ಸಮಿತಿ ವತಿಯಿಂದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಭಾರತೀಯ ರೈಲ್ವೆಯನ್ನು ಖಾಸಗೀಕರಣ ಮಾಡಬಾರದು. 109 ಮಾರ್ಗಗಳಲ್ಲಿ 151 ಖಾಸಗಿ ರೈಲುಗಳು ಚಲಿಸುವ ಯೋಜನೆಯನ್ನು ಕೈಬಿಡಬೇಕು. ರೈಲ್ವೆಗೆ ಸೇರಿದ ಜಮೀನು, ಕಾಲೊನಿ, ಆಸ್ಪತ್ರೆಗಳು, ವರ್ಕ್ಶಾಪ್ ಮತ್ತು ಇತರ ರೈಲ್ವೆ ಸಂಸ್ಥೆಗಳನ್ನು ಮುಚ್ಚುವುದು ಅಥವಾ ಮಾರಾಟ ಮಾಡುವುದನ್ನು ನಿಲ್ಲಿಸಬೇಕು ಎಂದು ಸಮಿತಿ ಆಗ್ರಹಿಸಿದೆ.
ಕಾರ್ಪೊರೇಟ್ ಸಂಸ್ಥೆಗಳಿಗೆ ಏಳು ರೈಲ್ವೆ ಉತ್ಪಾದಕ ಘಟಕಗಳನ್ನು ಮಾರಾಟ ಮಾಡುವ ನಿರ್ಧಾರ ಕೈಬಿಡಬೇಕು. ಉದ್ಯೋಗ ಕಡಿತದ ಬದಲು ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು. ಯಾವುದೇ ನೌಕರರನ್ನು ಕೆಲಸದಿಂದ ತೆಗೆಯಬಾರದು. ನಿವೃತ್ತ ನೌಕರರಿಗೂ ಎನ್ಪಿಎಸ್ ಬದಲು ಹಳೆಯ ಪಿಂಚಣಿ ಜಾರಿ ಮಾಡಬೇಕು. ರೈಲ್ವೆ ಪ್ರಯಾಣ ದರ ಹಾಗೂ ಸರಕು ಸಾಗಣೆ ದರ ಏರಿಸಬಾರದು. ವಿವೇಕ್ದೇವ್ ರಾಯ್ ಸಮಿತಿಯ ಶಿಫಾರಸುಗಳನ್ನು ರದ್ದುಗೊಳಿಸಬೇಕು ಎಂದುಒತ್ತಾಯಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.