ಬೆಂಗಳೂರು: ಲಾಕ್ ಡೌನ್ ಹಿನ್ನೆಲೆ ಅಕ್ಷಯ ಪಾತ್ರ ಪ್ರತಿಷ್ಠಾನವು ದೇಶದಾದ್ಯಂತ ಆಹಾರ ಸಮಸ್ಯೆಯಿಂದ ಬಳಲುತ್ತಿರುವ ನಿರ್ಗತಿಕರು ಹಾಗೂ ದುರ್ಬಲ ವರ್ಗದವರಿಗೆ ಸಿದ್ಧ ಆಹಾರ ಅಥವಾ ಆಹಾರ ಪದಾರ್ಥಗಳ ಕಿಟ್ ವಿತರಿಸಲು ಮುಂದಾಗಿದೆ.
ದೇಶದ ವಿವಿಧೆಡೆ ಇರುವ ಪ್ರತಿಷ್ಠಾನದ ಅಡುಗೆ ಮನೆಗಳಿಂದ ಆಹಾರ ಪೂರೈಸಲಿದೆ. ದಿನಕ್ಕೆ ಎರಡು ಬಾರಿಯಂತೆ ಸಿದ್ಧ ಅಡುಗೆ ಮತ್ತು ಆಹಾರ ಪದಾರ್ಥಗಳನ್ನು ಸಾರ್ವಜನಿಕರಿಗೆ ತಲುಪಿಸುವ ಪ್ರಕ್ರಿಯೆ ಇದಾಗಿದೆ.
ಆಹಾರ ಕಿಟ್ಗಳಲ್ಲಿ ಅಕ್ಕಿ, ಅಕ್ಕಿಹಿಟ್ಟು, ತೊಗರಿಬೇಳೆ, ಹೆಸರುಬೇಳೆ, ಕಡಲೆಕಾಳು, ಸೂರ್ಯಕಾಂತಿ ಎಣ್ಣೆ, ಅರಿಶಿನ, ಜೀರಿಗೆ, ಕೊತ್ತಂಬರಿ, ಉಪ್ಪಿನಕಾಯಿಯಂತಹ ಆಹಾರ ಪದಾರ್ಥಗಳು ಹಾಗೂ ಆಲೂಗಡ್ಡೆ, ಕುಂಬಳಕಾಯಿಯಂತಹ ಹಾಳಾಗದಂತಹ ತರಕಾರಿ
ಗಳು ಇರಲಿವೆ. ಒಂದು ಕಿಟ್ನ ಆಹಾರ ಪದಾರ್ಥಗಳಿಂದ ದಿನಕ್ಕೆ ಎರಡು ಬಾರಿಯಂತೆ 21 ದಿನಗಳವರೆಗೆ ಊಟ ತಯಾರಿಸಿಕೊಳ್ಳಬಹುದು.
ಕೇಂದ್ರ, ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಆಡಳಿತಗಳೊಂದಿಗೆ ಸೇರಿ ಆಹಾರ ವಿತರಣೆ ಮಾಡಲಿದೆ. ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಆಹಾರ ವಿತರಿಸುವುದು ಯೋಜನೆಯ ಉದ್ದೇಶ.
‘ಸಾರ್ವಜನಿಕರಿಗೆ ಆಹಾರದ ಕಿಟ್ ಮತ್ತು ಊಟವನ್ನು ವಿತರಿಸಲು ಕಾರ್ಪೋರೇಟ್ ಸಂಸ್ಥೆಗಳ ಸ್ವಯಂಸೇವಕರನ್ನು ಬಳಸಿಕೊಳ್ಳಲಿದ್ದೇವೆ. ಕಾರ್ಪೋರೇಟ್ ಪಾಲುದಾರರು, ವೈಯಕ್ತಿಕ ದಾನಿಗಳು, ಸ್ವಯಂ ಸೇವಕರು ಕೈಜೋಡಿಸಿದ್ದಾರೆ. ಕೊರೊನಾ ವಿರುದ್ಧ ನಮ್ಮ ಹೋರಾಟ ಬಲವಾಗಬೇಕು. ದೇಶದಲ್ಲಿ ಅನೇಕರಿಗೆ ಆಹಾರದ ಸಮಸ್ಯೆ ಎದುರಾಗಿದ್ದು, ಈ ಯೋಜನೆಯಿಂದ ಅವರ ಹಸಿವು ನೀಗಲಿದೆ' ಎಂದು ಅಕ್ಷಯ ಪಾತ್ರ ಪ್ರತಿಷ್ಠಾನದ ಅಧ್ಯಕ್ಷ ಮಧುಪಂಡಿತ್ ದಾಸ್ ತಿಳಿಸಿದರು.
ಮಾಹಿತಿಗೆ www.akshayapatra.org ವೀಕ್ಷಿಸಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.