ADVERTISEMENT

‘ಚುನಾವಣೆಗಳಲ್ಲಿ ಭಾವನಾತ್ಮಕ ವಿಷಯ ಚರ್ಚೆ’

ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನ್‌ ದಾಸ್‌ ಬೇಸರ

​ಪ್ರಜಾವಾಣಿ ವಾರ್ತೆ
Published 22 ಮೇ 2022, 16:04 IST
Last Updated 22 ಮೇ 2022, 16:04 IST
ಕಾರ್ಯಕ್ರಮದಲ್ಲಿ ನ್ಯಾ.ಎಚ್‌.ಎನ್‌. ನಾಗಮೋಹನ್‌ ದಾಸ್‌ ಹಾಗೂ ಮೈಸೂರಿನ ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಚರ್ಚಿಸಿದರು. ಪ್ರೊ.ಕಾಳೇಗೌಡ ನಾಗವಾರ ಹಾಗೂ ಬೀದರ್‌ ಜಿಲ್ಲೆಯ ಬುದ್ಧ ವಿಹಾರ್‌ನ ಬಂತೆ ವರಜ್ಯೋತಿ ಅಣದೂರ್‌ ಇದ್ದಾರೆ –ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ ನ್ಯಾ.ಎಚ್‌.ಎನ್‌. ನಾಗಮೋಹನ್‌ ದಾಸ್‌ ಹಾಗೂ ಮೈಸೂರಿನ ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಚರ್ಚಿಸಿದರು. ಪ್ರೊ.ಕಾಳೇಗೌಡ ನಾಗವಾರ ಹಾಗೂ ಬೀದರ್‌ ಜಿಲ್ಲೆಯ ಬುದ್ಧ ವಿಹಾರ್‌ನ ಬಂತೆ ವರಜ್ಯೋತಿ ಅಣದೂರ್‌ ಇದ್ದಾರೆ –ಪ್ರಜಾವಾಣಿ ಚಿತ್ರ   

‌ಬೆಂಗಳೂರು: ‘ಇತ್ತೀಚಿನ ದಿನಗಳಲ್ಲಿ ಚುನಾವಣೆಗಳು ಬಂದಾಗ ಜನಸಾಮಾನ್ಯರ ಬದುಕಿನ ಬಗ್ಗೆ ಚರ್ಚೆ ನಡೆಯುತ್ತಿಲ್ಲ. ಬದಲಾಗಿ, ಧರ್ಮ, ಜಾತಿಗೆ ಸಂಬಂಧಿಸಿದ ಭಾವನಾತ್ಮಕ ವಿಷಯಗಳು ಮುನ್ನೆಲೆಗೆ ಬರುತ್ತಿವೆ’ ಎಂದುಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನ್‌ ದಾಸ್‌ ಬೇಸರ ವ್ಯಕ್ತಪಡಿಸಿರು.

ಅಬಕಾರಿ ಇಲಾಖೆ ನಗರದಲ್ಲಿ ಭಾನುವಾರ ಹಮ್ಮಿಕೊಂಡಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಬಸವೇಶ್ವರ ಜಯಂತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ‘ಭಾರತಕ್ಕೆ ಭಯೋತ್ಪಾದನೆ, ಮೂಲಭೂತವಾದ, ಕೋಮುವಾದ, ಅಪರಾಧೀಕರಣ, ಭ್ರಷ್ಟಾಚಾರ, ಅತಿಯಾದ ವ್ಯಾಪಾರೀಕರಣ, ಸಾಂಸ್ಕೃತಿಕ ದಿವಾಳಿತನ ಸವಾಲುಗಳಾಗಿವೆ. ಪ್ರಜಾಪ್ರಭುತ್ವದ ಉಳಿವಿಗೆ ಸಂವಿಧಾನ ಅವಶ್ಯಕ. ಇಲ್ಲವಾದರೆ ಅರಾಜಕತೆ, ಕೋಮುವಾದ ರಾರಾಜಿಸುತ್ತದೆ’ ಎಂದು ಹೇಳಿದರು.

‘ದೇಶದ ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ವ್ಯವಸ್ಥೆಗಳು ಸಂವಿಧಾನದ ತಳಹದಿಯ ಮೇಲೆ ನಿಂತಿವೆ. ಸಂವಿಧಾನ ನಮ್ಮ ಧರ್ಮ ಗ್ರಂಥ. ಅದೇ ನಮ್ಮೆಲ್ಲರ ರಕ್ಷಾ ಕವಚ ಆಗಬೇಕು. ಸಂವಿಧಾನಕ್ಕೆ ಈಗಾಗಲೇ105 ಬಾರಿ ತಿದ್ದುಪಡಿ ಮಾಡಲಾಗಿದೆ. ಇರುವ ಸಂವಿಧಾನ ಶ್ರೀಮಂತಗೊಳಿಸಿ, ಗಟ್ಟಿಗೊಳಿಸಲು ತಿದ್ದುಪಡಿ ಅಗತ್ಯ.ಪ್ರಜಾಪ್ರಭುತ್ವದ ಉಳಿವಿಗೆ ಸಂವಿಧಾನ ಅವಶ್ಯಕವಾಗಿದ್ದು, ಅದನ್ನು ಕಾಪಾಡಿಕೊಂಡು ಹೋಗಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯ’ ಎಂದು ತಿಳಿಸಿದರು.

ADVERTISEMENT

ಜಾನಪದ ತಜ್ಞ ಕಾಳೇಗೌಡ ನಾಗವಾರ, ‘ಕೆಲ ರಾಜಕಾರಣಿಗಳು ಸಂವಿಧಾನದ ಮೂಲ ಆಶಯ ಅರಿತುಕೊಳ್ಳದೆಯೇ ಆಗಾಗ ಅಪಚಾರ ಮಾಡುತ್ತಾ ಇದ್ದಾರೆ. ‌ವ್ಯವಸ್ಥೆಯಲ್ಲಿನ ಲೋಪದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಬರೆಯಲಾರಂಭಿಸಿದ್ದಾರೆ. ಅವರನ್ನು ಒಗ್ಗೂಡಿಸುವ ಕೆಲಸವಾಗಬೇಕು’ ಎಂದು ಹೇಳಿದರು.

ಬೆಳಗಾವಿಯ ಹೆಚ್ಚುವರಿ ಅಬಕಾರಿ ಆಯುಕ್ತ (ಅಪರಾಧ) ವೈ. ಮಂಜುನಾಥ್, ‘ಸಮಾಜದಲ್ಲಿ ಬೇರೂರಿದ್ದಅಸ್ಪೃಶ್ಯತೆ ಹೋಗಲಾಡಿಸಲುಅಂಬೇಡ್ಕರ್ ಶ್ರಮಿಸಿದರು. ಅವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮಾತ್ರ ಮೀಸಲಾತಿ ನೀಡಿಲ್ಲ.ಆರ್ಥಿಕವಾಗಿ ಹಿಂದುಳಿದವರು, ಮಹಿಳೆಯರು ಸೇರಿದಂತೆ ಹಲವರಿಗೆ ಸಂವಿಧಾನದಲ್ಲಿ ಮೀಸಲಾತಿ ಕಲ್ಪಿಸಿದ್ದಾರೆ. ಅವರನ್ನು ಒಂದು ಜಾತಿಗೆ ಸಿಮೀತ ಮಾಡಲಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.