ಬೆಂಗಳೂರು: ‘ಭದ್ರಾ ಮೇಲ್ದಂಡೆ ಯೋಜನೆಯ ನಾಲೆ ಕಾಮಗಾರಿಗೆ ಅಮೃತ ಮಹಲ್ ಕಾವಲು ಜಾಗ ಬಳಕೆ ಮಾಡಿಕೊಳ್ಳುವುದಿಲ್ಲ’ ಎಂದು ವಿಶ್ವೇಶ್ವರಯ್ಯ ಜಲ ನಿಗಮ ಹೈಕೋರ್ಟ್ಗೆ ಭರವಸೆ ನೀಡಿದೆ.
‘ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು ಮತ್ತು ದಾವಣಗೆರೆ ಜಿಲ್ಲೆಗಳಿಗೆ ಭದ್ರಾ ಜಲಾಶಯದಿಂದ ನೀರು ಪೂರೈಸಲು ನಾಲೆ ನಿರ್ಮಿಸಲಾಗುತ್ತಿದ್ದು, ಅದು ಅಮೃತ ಮಹಲ್ ಕಾವಲು ಮೂಲಕವೇ ಹಾದು ಹೋಗಲಿದೆ’ ಎಂದು ಆರೋಪಿಸಿಡಿ.ವಿ. ಗಿರೀಶ್ ಮತ್ತು ಇತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
‘ಅಮೃತ ಮಹಲ್ ಕಾವಲು ಜಾಗಅಧಿಸೂಚಿತ ಅರಣ್ಯವಲ್ಲ ಎಂದುರಾಷ್ಟ್ರೀಯ ಹಸಿರು ನ್ಯಾಯಪೀಠ(ಎನ್ಜಿಟಿ) ಹೇಳಿದೆ. ಆದರೆ, ಅದು ಸಂರಕ್ಷಣೆ ಮಾಡಬೇಕಾದ ಭೂಮಿ ಎಂದು ತಿಳಿಸಿದೆ. ಹೀಗಾಗಿ, ಅಮೃತ ಮಹಲ್ ಕಾವಲು ಭೂಮಿಯನ್ನು ಮುಟ್ಟುವುದಿಲ್ಲ’ ಎಂದು ಜಲ ನಿಗಮದ ಪರ ವಕೀಲರು ತಿಳಿಸಿದರು.
‘ಪಶು ಸಂಗೋಪನಾ ಇಲಾಖೆಯ ವಶದಲ್ಲಿದ್ದ 61.41 ಎಕರೆ ಹುಲ್ಲುಗಾವಲು ಪ್ರದೇಶವನ್ನು ವಿಶ್ವೇಶ್ವರಯ್ಯ ಜಲ ನಿಗಮಕ್ಕೆ ನೀಡಲಾಗಿದೆ. ವನ್ಯಜೀವಿಗಳ ತಾಣವೂ ಆಗಿರುವ ಈ ಜಾಗವನ್ನು ಹಸ್ತಾಂತರ ಮಾಡುವುದು ವನ್ಯಜೀವಿ ರಕ್ಷಣಾ ಕಾಯ್ದೆ, ಅರಣ್ಯ ಸಂರಕ್ಷಣೆ ಮತ್ತು ಪರಿಸರ ಕಾಯ್ದೆಗಳಿಗೆ ವಿರುದ್ಧ’ ಎಂದು ಅರ್ಜಿದಾರರು ಆರೋಪಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.