ಸಾಂದರ್ಭಿಕ ಚಿತ್ರ
ಬೆಂಗಳೂರು: ವಿವಾಹಿತ ಮಹಿಳೆಗೆ ಪೀಡಿಸುತ್ತಿದ್ದ ಆಟೊ ಚಾಲಕನಿಗೆ ಮಹಿಳೆಯ ಪತಿ ಹಾಗೂ ಸಹೋದರ ಚಾಕುವಿನಿಂದ ಇರಿದಿದ್ದು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಬ್ಯಾಟರಾಯನಪುರ ಠಾಣಾ ವ್ಯಾಪ್ತಿಯ ನಾಯಂಡಹಳ್ಳಿ ಪಂತರಪಾಳ್ಯದಲ್ಲಿ ಘಟನೆ ನಡೆದಿದೆ.
ಹೊಸಗುಡ್ಡದಹಳ್ಳಿ ನಿವಾಸಿ ಕಾರ್ತಿಕ್(26) ಇರಿತಕ್ಕೆ ಒಳಗಾದವರು.
ಸದ್ಯ ಕಾರ್ತಿಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅಪಾಯದಿಂದ ಪಾರಾಗಿದ್ಧಾರೆ. ಘಟನೆ ಸಂಬಂಧ ಮಹಿಳೆಯ ಪತಿ ಸತೀಶ್, ಸಹೋದರ ವಿನೋದ್ ಮತ್ತು ಸೂರ್ಯ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.
ಆಟೊ ಚಾಲಕನಾಗಿರುವ ಕಾರ್ತಿಕ್, ಪಂತರಪಾಳ್ಯದ ವಿವಾಹಿತ ಮಹಿಳೆಯೊಂದಿಗೆ ಸಲುಗೆ ಬೆಳೆಸಲು ಮುಂದಾಗಿದ್ದ. ಅವರು ಬುದ್ಧಿಮಾತು ಹೇಳಿದ್ದರೂ ತೊಂದರೆ ಕೊಡುತ್ತಿದ್ದ. ಆತನ ವರ್ತನೆಯಿಂದ ಬೇಸತ್ತಿದ್ದ ಆಕೆ ಪತಿ ಹಾಗೂ ಸಹೋದರನಿಗೆ ಮಾಹಿತಿ ನೀಡಿದ್ದರು. ಈ ವಿಚಾರ ತಿಳಿದ ಮಹಿಳೆಯ ಪತಿ ಮತ್ತು ಸಹೋದರ, ಕಾರ್ತಿಕ್ಗೆ ಬುದ್ಧಿ ಹೇಳಿದ್ದರು. ಆದರೂ ಆತ ವರ್ತನೆ ಮುಂದುರಿಸಿದ್ದ. ಕೋಪಗೊಂಡ ಆರೋಪಿಗಳು ಸೋಮವಾರ ರಾತ್ರಿ ಚಾಕುವಿನಿಂದ ಇರಿದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.