ಬೆಂಗಳೂರು: ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಎಲ್ಲ ಪೌರಕಾರ್ಮಿಕರ ಕೆಲಸಗಳನ್ನು ಕಾಯಂಗೊಳಿಸದಿದ್ದರೆ ಜುಲೈ 1ರಿಂದ ಅನಿರ್ದಿಷ್ಟ ಕಾಲ ಮುಷ್ಕರ ನಡೆಸಲಾಗುವುದು ಎಂದು ಸಫಾಯಿ ಕರ್ಮಚಾರಿ ಹಾಗೂ ಪೌರಕಾರ್ಮಿಕರ ಸಂಘ ಎಚ್ಚರಿಕೆ ನೀಡಿದೆ.
’ಈಗಿನ ವ್ಯವಸ್ಥೆಯಲ್ಲಿ ಸರ್ಕಾರಿ ಅನುದಾನಿತ ಗುಲಾಮರಂತೆ ಕೆಲಸ ಮಾಡಬೇಕಿದೆ. ಆರೋಗ್ಯ ಸುರಕ್ಷೆ, ಕುಡಿಯುವ ನೀರು, ಹೆರಿಗೆ ರಜಾ, ಶೌಚಾಲಯಗಳನ್ನು ಬಳಸುವ ಅವಕಾಶವನ್ನು ಪೌರಕಾರ್ಮಿಕರಿಗೆ ನೀಡಬೇಕೆಂದು ಪದೇ ಪದೇ ಒತ್ತಾಯಿಸಿದರೂ ನಮ್ಮನ್ನು ಗುತ್ತಿಗೆದಾರರು, ಅಧಿಕಾರಿಗಳು ನಿರ್ಲಕ್ಷಿಸುತ್ತಾ ಬಂದಿದ್ದಾರೆ‘ ಎಂದು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿದ ಸಂಸ್ಥೆಯ ಸದಸ್ಯರು ಹೇಳಿದರು.
ಸದ್ಯಕ್ಕೆ ಬಹುತೇಕ ಪೌರಕಾರ್ಮಿಕರು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸುರಕ್ಷಾ ಪರಿಕರಗಳಾಗಲೀ, ವೃತ್ತಿಯ ಘನತೆಯಾಗಲೀ ಸಿಗುತ್ತಿಲ್ಲ. ಸುರಕ್ಷಾ ಪರಿಕರಗಳು ಬೇಕೆಂದು ಹಾಗೂ ಗುತ್ತಿಗೆ ಪದ್ಧತಿ ರದ್ದತಿಗೆ ಆಗ್ರಹಿಸಿ ಈ ಹಿಂದೆ ನಡೆಸಿದ ಪ್ರತಿಭಟನೆಗಳನ್ನು ಕೂಡ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಲಿಲ್ಲ. ಮಕ್ಕಳ ಶಿಕ್ಷಣಕ್ಕೆ ನೆರವು ನೀಡುವ ಖಾತರಿಯೂ ದೊರೆಯುತ್ತಿಲ್ಲ ಎಂದು ಪ್ರತಿಭಟನಾನಿರತರೊಬ್ಬರು ನುಡಿದರು.
ಶುಚಿಗೊಳಿಸುವ ಕೆಲಸ ಮಾಡುವವರು ಕೋವಿಡ್ನಿಂದ ವ್ಯತಿರಿಕ್ತ ಪರಿಣಾಮಗಳನ್ನು ಎದುರಿಸಿದ್ದಾರೆ. ವೈದ್ಯಕೀಯ ವೆಚ್ಚ ಏರುತ್ತಿರುವ ಈ ದಿನಗಳಲ್ಲಿ, ನಾಗರಿಕರು ಕೂಡ ಪೌರಕಾರ್ಮಿಕರನ್ನು ಕೆಟ್ಟದಾಗಿ ನೋಡುತ್ತಿದ್ದಾರೆ. ಅವರನ್ನು ಕೊಳಕರು ಎಂಬ ದೃಷ್ಟಿಯಿಂದ ಕಾಣುತ್ತಿದ್ದಾರೆ. ವಾರ್ಷಿಕ ಸಂಬಳದಲ್ಲಿ ಏರಿಕೆ ಮಾಡುವ ಭರವಸೆಯೂ ಪೂರ್ಣಪ್ರಮಾಣದಲ್ಲಿ ಈಡೇರಿಲ್ಲ ಎಂದೂ ದೂರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.