ADVERTISEMENT

ಅ.ನ.ಕೃ. ಸ್ಮಾರಕ ಭವನ ನಿರ್ಮಾಣಕ್ಕೆ ಜಾಗ ನೀಡಿ: ಅಶೋಕ್ ಹಾರನಹಳ್ಳಿ ಆಗ್ರಹ

‘ಅನಕೃ ಪ್ರಶಸ್ತಿ’ ಪ್ರದಾನ ಸಮಾರಂಭ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2025, 18:28 IST
Last Updated 9 ನವೆಂಬರ್ 2025, 18:28 IST
ಸಮಾರಂಭದಲ್ಲಿ ಲೇಖಕಿ ಎಲ್.ವಿ. ಶಾಂತಕುಮಾರಿ ಹಾಗೂ ವಿದ್ವಾಂಸ ಆರ್. ಗಣೇಶ್ ಅವರಿಗೆ ‘ಅನಕೃ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಎಸ್.ಆರ್. ರಾಮಸ್ವಾಮಿ, ರಂಗಕರ್ಮಿ ಬಿ.ವಿ. ರಾಜಾರಾಂ, ಅಶೋಕ್ ಹಾರನಹಳ್ಳಿ, ಶಶಿಕಿರಣ ಬಿ.ಎನ್., ಅ.ನ.ಕೃ. ಅವರ ಪುತ್ರ ಗೌತಮ್ ಹಾಗೂ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು
ಪ್ರಜಾವಾಣಿ ಚಿತ್ರ
ಸಮಾರಂಭದಲ್ಲಿ ಲೇಖಕಿ ಎಲ್.ವಿ. ಶಾಂತಕುಮಾರಿ ಹಾಗೂ ವಿದ್ವಾಂಸ ಆರ್. ಗಣೇಶ್ ಅವರಿಗೆ ‘ಅನಕೃ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಎಸ್.ಆರ್. ರಾಮಸ್ವಾಮಿ, ರಂಗಕರ್ಮಿ ಬಿ.ವಿ. ರಾಜಾರಾಂ, ಅಶೋಕ್ ಹಾರನಹಳ್ಳಿ, ಶಶಿಕಿರಣ ಬಿ.ಎನ್., ಅ.ನ.ಕೃ. ಅವರ ಪುತ್ರ ಗೌತಮ್ ಹಾಗೂ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ ಅ.ನ.ಕೃಷ್ಣರಾಯ ಅವರ ಹೆಸರಿನಲ್ಲಿ ಸ್ಮಾರಕ ಭವನ ನಿರ್ಮಿಸಲು ರಾಜ್ಯ ಸರ್ಕಾರ ಜಾಗ ಒದಗಿಸಬೇಕು’ ಎಂದು ವಕೀಲ ಅಶೋಕ್ ಹಾರನಹಳ್ಳಿ ಆಗ್ರಹಿಸಿದರು.

ಅ.ನ.ಕೃ. ಪ್ರತಿಷ್ಠಾನ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಲೇಖಕಿ ಎಲ್.ವಿ. ಶಾಂತಕುಮಾರಿ ಹಾಗೂ ವಿದ್ವಾಂಸ ಆರ್. ಗಣೇಶ್ ಅವರಿಗೆ ‘ಅನಕೃ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಈ ಪ್ರಶಸ್ತಿಯು ತಲಾ ₹50 ಸಾವಿರ ನಗದು ಒಳಗೊಂಡಿದೆ.

ಈ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಶೋಕ್ ಹಾರನಹಳ್ಳಿ, ‘ಅ.ನ.ಕೃ. ಅವರ ಹೆಸರಿನಲ್ಲಿ ಅ.ನ.ಕೃ. ಸ್ಮಾರಕ ಭವನ ನಿರ್ಮಾಣಕ್ಕೆ ಸರ್ಕಾರವು ಪ್ರತಿಷ್ಠಾನಕ್ಕೆ ಜಾಗವನ್ನು ನೀಡಿತ್ತು. ಈ ಜಾಗ ಹಂಚಿಕೆ ಪ್ರಕರಣ ಕಾರಣಾಂತರಗಳಿಂದ ಕೋರ್ಟ್‌ಗೆ ಹೋದ ಕಾರಣ, ಸ್ಮಾರಕ ಭವನ ನಿರ್ಮಾಣ ಸಾಧ್ಯವಾಗಿರಲಿಲ್ಲ. ಬೇರೆ ಜಾಗವನ್ನು ನೀಡುವಂತೆ ಕೋರ್ಟ್‌ ಸರ್ಕಾರಕ್ಕೆ ನಿರ್ದೇಶನ ನೀಡಿದ್ದರೂ ಆ ನಿಟ್ಟಿನಲ್ಲಿ ಸರ್ಕಾರ ಇನ್ನೂ ಕ್ರಮವಹಿಸಿಲ್ಲ. ಈಗಲಾದರೂ ಸ್ಮಾರಕ ಭವನ ನಿರ್ಮಾಣಕ್ಕೆ ಸರ್ಕಾರ ಜಾಗ ಒದಗಿಸಬೇಕು’ ಎಂದು ಹೇಳಿದರು. 

ADVERTISEMENT

ಆರ್. ಗಣೇಶ್, ‘ಅ.ನ.ಕೃ. ಅವರ ಜನ್ಮಶತಮಾನೋತ್ಸವದ ಅಂಗವಾಗಿ ಸರ್ಕಾರವು 2008ರಲ್ಲಿ ಅ.ನ.ಕೃ. ಅವರ ಸಮಗ್ರ ಸಾಹಿತ್ಯ ಪ್ರಕಟಣೆಯ ಯೋಜನೆಯನ್ನು ಹಮ್ಮಿಕೊಂಡಿತ್ತು. 15 ಸಂಪುಟಗಳು ಪ್ರಕಟಗೊಂಡಿದ್ದವು. ಇನ್ನೂ 15 ಸಂಪುಟಗಳು ಪ್ರಕಟವಾಗಬೇಕಿದೆ. ಯೋಜನೆ ಹಮ್ಮಿಕೊಂಡು 13 ವರ್ಷಗಳಾದರೂ ಬಾಕಿ ಸಂಪುಟಗಳು ಬಂದಿಲ್ಲ. 12 ವರ್ಷಗಳ ವನವಾಸ, ಒಂದು ವರ್ಷದ ಅಜ್ಞಾತವಾಸವೂ ಕಳೆದಿದೆ. ರಾಮನ 14 ವರ್ಷಗಳ ವನವಾಸದಂತೆ ಆಮೇಲಾದರೂ ಪ್ರಕಟಿಸುತ್ತಾರೋ ಇಲ್ಲವೋ ಎನ್ನುವುದು ತಿಳಿಯದಾಗಿದೆ. ಈ ಬಗ್ಗೆ ಸರ್ಕಾರಕ್ಕೆ ಒತ್ತಾಯ ಮಾಡಬೇಕಿದೆ. ಅ.ನ.ಕೃ. ಅವರು ಕನ್ನಡ ಮರೆಯಬಾರದ ಲೇಖಕರಾಗಿದ್ದಾರೆ’ ಎಂದರು. 

ರಾಷ್ಟ್ರೋತ್ಥಾನ ಸಾಹಿತ್ಯದ ಪ್ರಧಾನ ಸಂಪಾದಕ ಎಸ್.ಆರ್. ರಾಮಸ್ವಾಮಿ, ‘ಅ.ನ.ಕೃ ಅವರು ತಾವು ಶ್ರಮದಿಂದ ಗಳಿಸಿದ ಪಾಂಡಿತ್ಯವನ್ನು ಸಮಾಜಕ್ಕೆ ವಿನಿಯೋಗ ಮಾಡಲು ಹಗಲಿರುಳು ಶ್ರಮಿಸಿದರು. ಅವರು ಸಾಮಾಜಿಕ ಕಾದಂಬರಿಗಳ ಜತೆಗೆ ಐತಿಹಾಸಿಕ ಕಾದಂಬರಿಗಳನ್ನೂ ರಚಿಸಿದ್ದಾರೆ. ನಾಟಕ, ಜೀವನ ಚರಿತ್ರೆ, ವ್ಯಕ್ತಿಚಿತ್ರ ಸೇರಿ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಬರೆದಿದ್ದಾರೆ. ಅವರ ಕಾದಂಬರಿಗಳ ಜತೆಗೆ ಇತರ ಕೃತಿಗಳ ಬಗ್ಗೆಯೂ ಅಧ್ಯಯನ ಆಗಬೇಕು’ ಎಂದು ಹೇಳಿದರು. 

ಲೇಖಕ ಶಶಿಕಿರಣ್ ಬಿ.ಎನ್. ಪ್ರಶಸ್ತಿ ಪುರಸ್ಕೃತರ ಬಗ್ಗೆ ಅಭಿನಂದನಾ ನುಡಿಗಳನ್ನಾಡಿದರು. 

ಬಾಲ್ಯದಲ್ಲಿಯೇ ಅ.ನ.ಕೃ. ಅವರ ಪುಸ್ತಕಗಳನ್ನು ಓದುತ್ತಿದ್ದೆ. ಅವರ ಪುಸ್ತಕಗಳು ಮೋಡಿ ಮಾಡುತ್ತಿದ್ದವು. ಅವರ ಪುಸ್ತಕಗಳ ಓದಿನಿಂದ ಕನ್ನಡ ಸಾಹಿತ್ಯದ ಬಗ್ಗೆ ಅಭಿಮಾನ ಬೆಳೆಯಿತು.
– ಎಲ್.ವಿ. ಶಾಂತಕುಮಾರಿ, ಲೇಖಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.