ಬೆಂಗಳೂರು: ಕಟ್ಟಡ ಕಾರ್ಮಿಕರಿಗೆ ಅಗತ್ಯ ಸೇವೆ ಕಲ್ಪಿಸುವ ಮೂಲಕ ಅವರು ಈಗಿರುವ ಸ್ಥಳ ಬಿಟ್ಟು ಬೇರೆಡೆ ತೆರಳದಂತೆ ನಿಗಾವಹಿಸಲು ನಿರ್ಮಾಣ ಚಟುವಟಿಕೆ ನಡೆಯುವ ಪ್ರತಿ ಜಾಗದಲ್ಲೂ ನೋಡಲ್ ಅಧಿಕಾರಿಗಳನ್ನು ನಿಯೋಜಿಸುವಂತೆ ಬಿಲ್ಡರ್ಗಳಿಗೆ ಸೂಚಿಸಲಾಗಿದೆ ಎಂದು ಕಂದಾಯ ಸಚಿವರ ಆರ್.ಅಶೋಕ ತಿಳಿಸಿದರು.
ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, ‘ಕೊರೋನಾ ವೈರೆಸ್ ಸೋಂಕು ಹಿನ್ನೆಲೆ ಕಟ್ಟಡ ಕಾರ್ಮಿಕರು ಗುಳೆ ಹೋಗುವುದನ್ನು ತಪ್ಪಿಸಬೇಕು. ಯಾವೊಬ್ಬ ಕಾರ್ಮಿಕರೂ ಹಸಿವಿನಿಂದ ಇರಬಾರದು.ಅವರಿಗೆ ಇರುವ ಸ್ಥಳದಲ್ಲೇ ವಸತಿ, ಊಟದ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ ಕಲ್ಪಿಸಬೇಕು. ವೈದ್ಯಕೀಯ ಸೇವೆಯೂ ಸೇರಿದಂತೆ ಎಲ್ಲ ರೀತಿಯ ಮೂಲಭೂತ ಸೌಲಭ್ಯಗಳ ವ್ಯವಸ್ಥೆ ಮಾಡಬೇಕು ಎಂದು ಕಾನ್ಫೆಡರೇಷನ್ ಆಫ್ ರಿಯಲ್ ಎಸ್ಟೇಟ್ ಡೆವಲಪರ್ಸ್ ಅಸೋಸಿಯೇಷನ್ (ಕ್ರೆಡೈ) ಹಾಗೂ ಬಿಲ್ಡರ್ಗಳ ಇತರ ಸಂಸ್ಥೆಗಳ ಜೊತೆ ನಡೆದ ಸಭೆಯಲ್ಲಿ ಸೂಚನೆ ನೀಡಿದ್ದೇವೆ’ ಎಂದರು.
‘ನಗರದಲ್ಲಿ ಹೊರರಾಜ್ಯ, ಹೊರಜಿಲ್ಲೆಗಳಿಂದ ಬಂದ ಸುಮಾರು 65 ಸಾವಿರ ಕಾರ್ಮಿಕರಿದ್ದಾರೆ. ಅವರಲ್ಲಿ 30 ಸಾವಿರಕ್ಕೂ ಮಂದಿ ಈಗಲೂ ನಗರದಲ್ಲಿದ್ದಾರೆ. ಅವರು ರಸ್ತೆಯಲ್ಲಿ ಓಡಾಡುವುದು ಕಂಡುಬಂದರೆ ಸಂಬಂಧಪಟ್ಟ ಬಿಲ್ಡರ್ಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿಕೊಂಡು ಬಂಧಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.