ಬೆಂಗಳೂರು: ‘ಅರಸು ಪ್ರಶಸ್ತಿ ಪ್ರದಾನದಲ್ಲಿ ಆಗಿರುವ ವಿಳಂಬವನ್ನು ಸರಿಪಡಿಸಿಕೊಂಡು, ಸರ್ಕಾರ ಕೂಡಲೆ ಸಮಾರಂಭವನ್ನು ಆಯೋಜಿಸಬೇಕು’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪಒತ್ತಾಯಿಸಿದ್ದಾರೆ.
ಈ ಕುರಿತು ಹಿಂದುಳಿದ ವರ್ಗಗಳ ಕಲ್ಯಾಣಸಚಿವರಿಗೆ ಪತ್ರ ಬರೆದಿರುವ ಅವರು,‘ದೇವರಾಜ ಅರಸು ಅವರ ಜನ್ಮದಿನದಂದು ಸರ್ಕಾರ ಅವರ ಹೆಸರಿನಲ್ಲಿ ಪ್ರಶಸ್ತಿಯನ್ನು ನೀಡುತ್ತ ಬಂದಿದೆ. ಈ ಬಾರಿ, ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷನನ್ನಾಗಿ ನನ್ನನ್ನು ನಾಮನಿರ್ದೇಶನ ಮಾಡಲಾಗಿತ್ತು’.
‘ಆಗಸ್ಟ್ನಲ್ಲಿ ಪ್ರಶಸ್ತಿಗೆ ಒಬ್ಬ ಸಾಧಕರ ಹೆಸರನ್ನು ಆಯ್ಕೆ ಮಾಡಲಾಗಿತ್ತು. ಆದರೆ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನದಿಂದ ಮತ್ತು ಕೊಡಗು ಪ್ರವಾಹದಿಂದಾಗಿ ಜಯಂತಿಯನ್ನು ಮುಂದೂಡಲಾಗಿತ್ತು. ಆದರೆ, ಪ್ರಶಸ್ತಿ ಪ್ರದಾನಕ್ಕೆ ಸರ್ಕಾರ ಆದೇಶ ಹೊರಡಿಸಿ ಮೂರು ತಿಂಗಳಾಗಿದ್ದರೂ ಸಮಾರಂಭ ಮಾಡದೆ ಇರುವುದು ಸಮರ್ಥನೀಯವಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಈ ವಿಳಂಬಂದಾಗಿ ಅರಸು ಅವರನ್ನು ಅವಮಾನಿಸಿದಂತಾಗಿದ್ದು, ಪ್ರಶಸ್ತಿ ಪುರಸ್ಕೃತರನ್ನು ನಿರ್ಲಕ್ಷ್ಯಿಸಿದಂತಾಗಿದೆ. ಕೂಡಲೆ ಸಮಾರಂಭವನ್ನು ಏರ್ಪಡಿಸಿ ನ್ಯಾಯ ಒದಗಿಸಬೇಕೆಂದು’ ಅವರು ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.