ADVERTISEMENT

ಚಿನ್ನಾಭರಣ ಮಳಿಗೆ ಮಾಲೀಕನ ತೊಡೆಗೆ ಗುಂಡು ಹಾರಿಸಿ 1 ಕೆ.ಜಿ ಆಭರಣ ದರೋಡೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2023, 10:47 IST
Last Updated 12 ಅಕ್ಟೋಬರ್ 2023, 10:47 IST
   

ಬೆಂಗಳೂರು: ಬ್ಯಾಡರಹಳ್ಳಿ ಗೊಲ್ಲರಹಟ್ಟಿಯಲ್ಲಿರುವ ‘ವಿನಾಯಕ್ ಜ್ಯುವೆಲರ್ಸ್’ ಮಳಿಗೆಗೆ ನುಗ್ಗಿದನಾಲ್ವರು ದುಷ್ಕರ್ಮಿಗಳು, ಮಾಲೀಕನ ತೊಡೆಗೆ ಗುಂಡು ಹಾರಿಸಿ 1 ಕೆ.ಜಿ ಚಿನ್ನಾಭರಣ ದರೋಡೆ ಮಾಡಿದ್ದಾರೆ.

ಗುರುವಾರ ಬೆಳಿಗ್ಗೆ 10.45ರ ಸುಮಾರಿಗೆ ಈ ಘಟನೆ ನಡೆದಿದೆ. ಮಾಲೀಕ ಮನೋಜ್ ಲೋಹರ್ ತೀವ್ರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

‘ಮನೋಜ್ ಅವರು ಗುರುವಾರ ಎಂದಿನಂತೆ ಮಳಿಗೆ ತೆರೆದು ವ್ಯಾಪಾರ ಆರಂಭಿಸಿದ್ದರು. ಎರಡು ದ್ವಿಚಕ್ರ ವಾಹನಗಳಲ್ಲಿ ಮಳಿಗೆ ಬಳಿ ಬಂದಿದ್ದ ನಾಲ್ವರು ದುಷ್ಕರ್ಮಿಗಳು, ಮಳಿಗೆಯೊಳಗೆ ನುಗ್ಗಿದ್ದರು. ಮಾಲೀಕನಿಗೆ ಪಿಸ್ತೂಲ್ ತೋರಿಸಿ, ಚಿನ್ನಾಭರಣ ನೀಡುವಂತೆ ಹೆದರಿಸಿದ್ದರು. ಆಭರಣ ನೀಡಲು ಮಾಲೀಕ ಒಪ್ಪಿರಲಿಲ್ಲ. ಇದೇ ಸಂದರ್ಭದಲ್ಲಿ ದುಷ್ಕರ್ಮಿಗಳು, ಮಾಲೀಕನ ತೊಡೆಗೆ ಗುಂಡು ಹೊಡೆದಿದ್ದರು’ ಎಂದು ಪೊಲೀಸರು ಹೇಳಿದರು.

ADVERTISEMENT

‘ಮಾಲೀಕ ಕುಸಿದು ಬೀಳುತ್ತಿದ್ದಂತೆ ದುಷ್ಕರ್ಮಿಗಳು, ಮಳಿಗೆಯಲ್ಲಿದ್ದ ಚಿನ್ನಾಭರಣವನ್ನು ಚೀಲದಲ್ಲಿ ತುಂಬಿಕೊಂಡು ಪರಾರಿಯಾಗಿದ್ದಾರೆ. ಸ್ಥಳೀಯರೇ ಮನೋಜ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ’ ಎಂದರು.

‘ಮಳಿಗೆ ಬಗ್ಗೆ ಮಾಹಿತಿಯುಳ್ಳವರೇ ಕೃತ್ಯ ಎಸಗಿರುವ ಅನುಮಾನವಿದೆ. ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ. ಸ್ಥಳದಲ್ಲಿರುವ ಸಿ.ಸಿ.ಟಿ.ವಿ ಕ್ಯಾಮೆರಾ ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.