ADVERTISEMENT

ಐವರು ರೌಡಿ ಶೀಟರ್‌ಗಳ ಬಂಧನ: ಮಾರಕಾಸ್ತ್ರ ವಶ

​ಪ್ರಜಾವಾಣಿ ವಾರ್ತೆ
Published 19 ಜೂನ್ 2020, 13:04 IST
Last Updated 19 ಜೂನ್ 2020, 13:04 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ಮಾರಕಾಸ್ತ್ರ ಹಿಡಿದು ಡಕಾಯಿತಿಗೆ ಹೊಂಚು ಹಾಕುತ್ತಿದ್ದ ಐವರು ರೌಡಿ ಶೀಟರ್‌ಗಳನ್ನು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಸಂಘಟಿತ ಅಪರಾಧ ತಡೆ ವಿಭಾಗದ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಆರೋಪಿಗಳಿಂದ ಕಬ್ಬಿಣದ ರಾಡು, ಚಾಕು, ದೊಣ್ಣೆ ಹಾಗೂ ಖಾರದಪುಡಿ ಪೊಟ್ಟಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಎಚ್‌ಎಎಲ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ದಾರಿ ಹೋಕರನ್ನು ಅಡ್ಡಹಾಕಿ, ನಗದು– ನಾಣ್ಯ ದೋಚಲು ಕಾದಿದ್ದಾಗ ಬಂಧಿಸಲಾಗಿದೆ.

ಸಾರಾಯಿಪಾಳ್ಯದ ಸಾದಿಕ್‌ ಅಲಿಯಾಸ್‌ ಸುಗ್ಗು (30), ಮಹಮ್ಮದ್‌ ಇಮ್ರಾನ್‌ ಅಲಿಯಾಸ್‌ ಲಾರಿ ಇಮ್ರಾನ್‌ (28), ಮುಬಾರಕ್‌ ಅಲಿಯಾಸ್‌ ಬಾಲಿ (35), ಎಚ್‌‌ಬಿಆರ್‌ ಬಡಾವಣೆಯ ಸಯ್ಯದ್‌ ಹನೀಫ್‌ ಅಲಿಯಾಸ್‌ ಡಾನ್‌ (25) ಹಾಗೂ ಅಕ್ರಮ್‌ ಪಾಷಾ (29) ಬಂಧಿತರು.

ADVERTISEMENT

ಸಾದಿಕ್‌, ಮುಬಾರಕ್‌, ಸಯ್ಯದ್‌ ಹನೀಫ್‌ ಸಂಪಿಗೆಹಳ್ಳಿ ಪೊಲೀಸ್‌ ಠಾಣೆ ರೌಡಿ ಶೀಟರ್‌ ಆಗಿದ್ದು, ‌ವಿವಿಧ ಠಾಣೆಗಳಲ್ಲಿ ಕೊಲೆ, ಕೊಲೆಯತ್ನ, ದರೋಡೆ ಸೇರಿದಂತೆ ಕ್ರಮವಾಗಿ 20, ಆರು ಪ್ರಕರಣಗಳಿವೆ. ಹನೀಫ್‌ ವಿರುದ್ಧವೂ ಕೊಲೆ ಯತ್ನ, ಹಲ್ಲೆ ಆರೋಪಗಳಿವೆ.

ಇಮ್ರಾನ್‌ ನೆಲಮಂಗಲ ಠಾಣೆಯಲ್ಲಿ ದಾಖಲಾದ ಕೊಲೆ ಪ್ರಕರಣವೊಂದರ ಆರೋಪಿ. ಅಕ್ರಮ್‌ ಪಾಷಾ ವಿರುದ್ಧವೂ ಸಂಪಿಗೆಹಳ್ಳಿ ಠಾಣೆಯಲ್ಲಿ ದರೋಡೆ ಯತ್ನದ ಪ್ರಕರಣ ಇದೆ. ಆರೋಪಿಗಳ ಬಂಧನದಿಂದ ಎಚ್‌ಎಎಲ್‌ ಪೊಲೀಸ್‌ ಠಾಣೆ ವ್ಯಾಪ್ತಿಯ ದರೋಡೆ ಪ್ರಕರಣ ಮತ್ತು ಬಾಣಸವಾಡಿ ಠಾಣೆ ವ್ಯಾಪ್ತಿಯ ಬೈಕ್‌ ಕಳವು ಪ್ರಕರಣ ಪತ್ತೆಯಾದಂತಾಗಿದೆ.

ಆರೋಪಿಗಳ ವಿರುದ್ಧ ವಿವಿಧ ನ್ಯಾಯಾಲಯಗಳು ಹೊರಡಿಸಿರುವ ಬಂಧನ ವಾರಂಟ್‌ಗಳು ಜಾರಿಗೆ ಬಾಕಿ ಇವೆ. ಎಚ್‌ಎಎಲ್‌ ಠಾಣೆಯಲ್ಲಿ ದರೋಡೆ ಯತ್ನ ಪ್ರಕರಣ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.