ADVERTISEMENT

ವಕೀಲನ ಅಪಹರಣ: ಸಿನಿಮಾ ಸಾಹಸ ಕಲಾವಿದರ ಬಂಧನ

ಹೂಡಿದ್ದ ಹಣ ವಾಪಸು ಬಾರದಿದ್ದಕ್ಕೆ ಕೃತ್ಯ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2021, 2:34 IST
Last Updated 30 ಸೆಪ್ಟೆಂಬರ್ 2021, 2:34 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ಕಂಪನಿಯೊಂದರಲ್ಲಿ ಹೂಡಿಕೆ ಮಾಡಿದ್ದ ಹಣ ವಾಪಸು ಬರಲಿಲ್ಲವೆಂಬ ಕಾರಣಕ್ಕೆ, ಕಂಪನಿಯ ಕಾನೂನು ಸಲಹೆಗಾರರಾಗಿದ್ದ ವಕೀಲನನ್ನೇ ಅಪಹರಿಸಿದ್ದ ಆರೋಪದಡಿ ಸಿನಿಮಾ ಸಾಹಸ ಕಲಾವಿದರು ಸೇರಿ 9 ಮಂದಿಯನ್ನು ಅನ್ನಪೂರ್ಣೇಶ್ವರಿನಗರ ಪೊಲೀಸರು ಬಂಧಿಸಿದ್ದಾರೆ.

‘ತಿಗಳರಪಾಳ್ಯದ ಸಿದ್ದೇಶ್ (31), ಡಾಲರ್ಸ್ ಕಾಲೊನಿಯ ವಿಜಯಕುಮಾರ್ (33) ಮತ್ತು ಸಿನಿಮಾ ಸಾಹಸ ಕಲಾವಿದರಾಗಿದ್ದ ಬೊಮ್ಮನಹಳ್ಳಿಯ ಎಸ್. ಸಂಜಯ್ ಅಲಿಯಾಸ್ ಸಂಜು (27), ಶಾಂತಿಪ್ರಿಯ ಲೇಔಟ್‌ನ ನೆಲ್ಸನ್ (23), ಕತ್ರಿಗುಪ್ಪಿಯ ಯುಗಾನಂದ್ (22), ಬೆಟ್ಟಹಳ್ಳಿ ಲೇಔಟ್‌ನ ನರೇಶ್ (30), ಅರುಣ್ ಕುಮಾರ್ (29), ನ್ಯೂ ಗುಡ್ಡದಹಳ್ಳಿಯ ಯುವರಾಜ್ (31) ಹಾಗೂ ಅಶೋಕ (31) ಬಂಧಿತರು. ಕೃತ್ಯಕ್ಕೆ ಬಳಸಿದ್ದ ಎರಡು ಕಾರು, ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ನಾಗರಬಾವಿ ನಿವಾಸಿಯಾದ ವಕೀಲ ಅಭಯ್ ಕುಲಕರ್ಣಿ ಅವರನ್ನು ಅಪಹರಿಸಲಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ಅಂದ್ರಹಳ್ಳಿ ಬಳಿ ಆರೋಪಿಗಳು ಸಿಕ್ಕಿಬಿದ್ದರು . ಸದ್ಯ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ADVERTISEMENT

‘ಹಣದ ಬಗ್ಗೆ ಮಾತನಾಡಲೆಂದು ಅಭಯ್‌ ಅವರನ್ನು ಸೆ. 20ರಂದು ಕರೆಸಿಕೊಂಡಿದ್ದ ಆರೋಪಿ ಸಿದ್ದೇಶ್, ತನ್ನ ಸ್ನೇಹಿತರ ಜೊತೆ ಸೇರಿ ಅಪಹರಣ ಮಾಡಿ ಅಕ್ರಮ ಬಂಧನದಲ್ಲಿಟ್ಟಿದ್ದ.’

‘ಅಭಯ್ ಸಹೋದರನಿಗೆ ಕರೆ ಮಾಡಿದ್ದ ಆರೋಪಿಗಳು, ‘₹10 ಲಕ್ಷ ಕೊಟ್ಟರಷ್ಟೇ ಬಿಡುಗಡೆ ಮಾಡುತ್ತೇವೆ. ಇಲ್ಲದಿದ್ದರೆ, ಜೀವ ಸಹಿತ ಬಿಡುವುದಿಲ್ಲ’ ಎಂದಿದ್ದರು. ಸಹೋದರ ದೂರು ನೀಡಿದ್ದರು’ ಎಂದೂ ಮೂಲಗಳು ಹೇಳಿವೆ.

‘ಭರ್ಜರಿ’ ಸೇರಿ ಹಲವು ಸಿನಿಮಾಗಳಲ್ಲಿ ಸಾಹಸ ಕಲಾವಿದರಾಗಿ ನಟಿಸಿದ್ದವರು ಅಪಹರಣದಲ್ಲಿ ಭಾಗಿಯಾಗಿದ್ದಾರೆ’ ಎಂದೂ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.