ಬೆಂಗಳೂರು: ‘ಆಸ್ಪತ್ರೆಗಳನ್ನು ಸ್ವಚ್ಛವಾಗಿಡುವಲ್ಲಿ ‘ಡಿ’ ದರ್ಜೆ ನೌಕರರ ಪಾತ್ರ ಮಹತ್ವದ್ದು. ಹೀಗಾಗಿ ಅವರನ್ನು ಎಲ್ಲರೂ ಗೌರವಭಾವದಿಂದ ಕಾಣಬೇಕು’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದರು.
ಆಕ್ಸಾ ಮತ್ತು ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ ಸಂಸ್ಥೆ ವತಿಯಿಂದ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ‘ಡಿ’ ದರ್ಜೆ ನೌಕರರಿಗೆ ಆಹಾರದ ಕಿಟ್ ವಿತರಿಸಿದರು.
‘ಸ್ವಚ್ಛತೆಯ ಕಾರ್ಯದಲ್ಲಿ ತೊಡಗಿರುವ, ರೋಗಿಗಳ ಹಾಸಿಗೆಗಳ ಬಟ್ಟೆಗಳನ್ನು ಬದಲಿಸುವ, ನೆಲ ಗುಡಿಸುವ ಹಾಗೂ ಒರೆಸುವ ಸಿಬ್ಬಂದಿಯ ಕಾರ್ಯ ಮೆಚ್ಚುವಂತಹದ್ದು. ಕೋವಿಡ್ ಸಮಯದಲ್ಲಿ ಅವರೆಲ್ಲಾ ಜೀವದ ಹಂಗು ತೊರೆದು ಕೆಲಸ ಮಾಡಿದ್ದಾರೆ. ಅವರು ಗೌರವಯುತ ಬದುಕು ಕಟ್ಟಿಕೊಳ್ಳಲು ಬೇಕಿರುವ ಅಗತ್ಯ ಸೌಕರ್ಯಗಳನ್ನು ಸರ್ಕಾರ ಕಲ್ಪಿಸಿದೆ. ವೈದ್ಯರು, ಶುಶ್ರೂಷಕಿಯರು, ಅರೆ ವೈದ್ಯ ಸಿಬ್ಬಂದಿ ಮತ್ತು ‘ಡಿ’ ದರ್ಜೆ ನೌಕರರ ವೇತನ ಹಾಗೂ ಭತ್ಯೆಗಳನ್ನೂ ಹೆಚ್ಚಿಸಲಾಗಿದೆ’ ಎಂದರು.
ಕಾರ್ಯಕ್ರಮದಲ್ಲಿ ಒಟ್ಟು130 ಸಿಬ್ಬಂದಿಗೆ ಕಿಟ್ ವಿತರಣೆ ಮಾಡಲಾಯಿತು. ಆಕ್ಸಾ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಶ್ರೀಕೃಷ್ಣ, ರಾಜ್ಯ ಸರ್ಕಾರದ ಸಿಎಸ್ಆರ್ ಸಂಯೋಜಕ ಕೆ.ವಿ. ಮಹೇಶ್, ಕೆ.ಸಿ ಜನರಲ್ ಆಸ್ಪತ್ರೆಯ ಅಧೀಕ್ಷಕ ಡಾ.ವೆಂಕಟೇಶಯ್ಯ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.