FIR
– ಕಡತ ಚಿತ್ರ
ಬೆಂಗಳೂರು: ನಿಯಮ ಉಲ್ಲಂಘನೆ ಕಾರಣಕ್ಕೆ ಅಸ್ಸಾಂ ರಾಜ್ಯದ ಬುಡಕಟ್ಟು ಜನರ ಸಂಸ್ಕೃತಿ ಹಬ್ಬ (ಕರ್ಮ ಪೂಜಾ ಫೆಸ್ಟಿವಲ್) ಆಚರಣೆಗೆ ನೀಡಿದ್ದ ಅನುಮತಿಯನ್ನು ರದ್ದುಗೊಳಿಸಿ, ಆಯೋಜಕರ ಸಹಿತ 15 ಮಂದಿ ವಿರುದ್ಧ ವರ್ತೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
‘ಸರ್ಜಾಪುರ ರಸ್ತೆಯ ಕಾಲೇಜು ಮೈದಾನದಲ್ಲಿ ಭಾನುವಾರ ಹಬ್ಬಕ್ಕೆ 500 ಜನರು ಸೇರುತ್ತಾರೆ ಎಂದು ಆಯೋಜಕರು ಹೇಳಿದ್ದರು. ಆದರೆ, ಕಾರ್ಯಕ್ರಮಕ್ಕೆ ಅಂದಾಜು ಎರಡರಿಂದ ಮೂರು ಸಾವಿರ ಜನರು ಸೇರಿದ್ದರು. ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಸಾಧ್ಯತೆ ಇದ್ದ ಕಾರಣ ಕಾರ್ಯಕ್ರಮವನ್ನು ಕೂಡಲೇ ನಿಲ್ಲಿಸುವಂತೆ ಸೂಚಿಸಿ, ಅನುಮತಿಯನ್ನು ರದ್ದು ಪಡಿಸಲಾಯಿತು’ ಎಂದು ಡಿಸಿಪಿ ಗಿರೀಶ್ ತಿಳಿಸಿದ್ದಾರೆ.
‘ಕಾರ್ಯಕ್ರಮ ರದ್ದುಗೊಂಡಿದ್ದರಿಂದ ನಿರಾಶೆಗೊಂಡ ಜನರು, ಕುರ್ಚಿಗಳನ್ನು ಬಿಸಾಡಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೆಲಕಾಲ ಸ್ಥಳದಲ್ಲಿ ಗೊಂದಲದ ವಾತಾವರಣ ಉಂಟಾಗಿತ್ತು. ಬಳಿಕ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ಕರೆಯಿಸಿ ಸ್ಥಳದಲ್ಲಿದ್ದ ಜನರನ್ನು ನಿಯಂತ್ರಿಸಿ, ಹೊರಕ್ಕೆ ಕಳುಹಿಸಲಾಯಿತು. ಐದು ವರ್ಷಗಳಿಂದ ಕಾರ್ಯಕ್ರಮ ಆಯೋಜಿಸುತ್ತಿದ್ದು, ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದಿದ್ದರು. ಜನದಟ್ಟಣೆ ನಿಯಂತ್ರಿಸಲು ಆಯೋಜಕರಿಗೂ ಕಷ್ಟವಾಯಿತು. ಕರ್ಮ ಪೂಜಾ ಕಮಿಟಿಯ ಮುಖ್ಯಸ್ಥರಾದ ಚಿತ್ರಾ ತಾರ್ಕಿ ಸೇರಿದಂತೆ ಕೆಲವರ ವಿರುದ್ಧ ವರ್ತೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.