ಬೆಂಗಳೂರು: ಎಟಿಎಂ ಘಟಕದಲ್ಲಿದ್ದ ಯಂತ್ರ ದುರಸ್ತಿ ಮಾಡುವ ಸೋಗಿನಲ್ಲಿ ₹ 30 ಲಕ್ಷ ಕದ್ದು ಪರಾರಿಯಾಗಿದ್ದ ಆರೋಪಿ ವಿನಯ್ ಜೋಗಿ ಎಂಬಾತನನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ.
‘ಲಗ್ಗೆರೆ ನಿವಾಸಿಯಾದ ವಿನಯ್, ಎಟಿಎಂ ಘಟಕಗಳಿಗೆ ಹಣ ತುಂಬಿಸುವ ಜವಾಬ್ದಾರಿ ವಹಿಸಿಕೊಂಡಿದ್ದ ಸೆಕ್ಯೂರ್ ವ್ಯಾಲ್ಯೂ ಕಂಪನಿಯಲ್ಲಿ ಕಸ್ಟೋಡಿಯನ್ ಆಗಿ ಕೆಲಸ ಮಾಡುತ್ತಿದ್ದ. ಆಗಸ್ಟ್ 24ರಂದು ಗೊಲ್ಲರಹಟ್ಟಿಯಲ್ಲಿರುವ ಕೆನರಾ ಬ್ಯಾಂಕ್ ಎಟಿಎಂ ಘಟಕದಲ್ಲಿ ಕೃತ್ಯ ಎಸಗಿ ಪರಾರಿಯಾಗಿದ್ದ’ ಎಂದು ಪೊಲೀಸರು ಹೇಳಿದರು.
‘ಯಂತ್ರಗಳನ್ನು ಆರೋಪಿಯೇ ದುರಸ್ತಿ ಮಾಡುತ್ತಿದ್ದ. ಆತನ ಬಳಿ ಗುರುತಿನ ಚೀಟಿಯೂ ಇತ್ತು. ಹೀಗಾಗಿ, ಆತ ಘಟಕಕ್ಕೆ ಹೋಗುತ್ತಿದ್ದಂತೆ ಭದ್ರತಾ ಸಿಬ್ಬಂದಿ ಹಾಗೂ ಗ್ರಾಹಕರು ಸಹ ಪ್ರಶ್ನಿಸಿರಲಿಲ್ಲ. ಕೃತ್ಯ ನಡೆದ ಮರುದಿನದಿಂದ ಆರೋಪಿ ಕೆಲಸಕ್ಕೆ ಬಂದಿರಲಿಲ್ಲ. ಅನುಮಾನಗೊಂಡ ಕಂಪನಿ ವ್ಯವಸ್ಥಾಪಕ, ಘಟಕದಲ್ಲಿ ಪರಿಶೀಲನೆ ನಡೆಸಿದಾಗ ಹಣ ಕದ್ದಿರುವುದು ಗಮನಕ್ಕೆ ಬಂದಿತ್ತು. ಬಳಿಕ ಠಾಣೆಗೆ ದೂರು ನೀಡಿದ್ದರು’ ಎಂದೂ ತಿಳಿಸಿದರು.
‘ಸಾಲ ಮಾಡಿಕೊಂಡಿದ್ದ ಆರೋಪಿ, ಅದನ್ನು ತೀರಿಸಿರಲಿಲ್ಲ. ಸಾಲ ಮರುಪಾವತಿಗಾಗಿ ಸಾಲಗಾರರು ನಿತ್ಯವೂ ಪೀಡಿಸುತ್ತಿದ್ದರು. ಅದೇ ಕಾರಣಕ್ಕೆ ಆರೋಪಿ, ಯಂತ್ರದಲ್ಲಿದ್ದ ಹಣ ಕದ್ದು ಹೋಗಿದ್ದ. ಅದರಲ್ಲಿ, ₹ 14.50 ಲಕ್ಷವನ್ನು ತಂದೆ- ತಾಯಿಗೆ ಕೊಟ್ಟಿದ್ದ. ₹ 11 ಲಕ್ಷವನ್ನು ಸಾಲಗಾರರಿಗೆ ನೀಡಿದ್ದ. ಹಣವನ್ನು ಜಪ್ತಿ ಮಾಡಲಾಗಿದೆ’ ಎಂದೂ ಹೇಳಿದರು.
‘ಆರೋಪಿಯು ವಿವಿಧ ಯಂತ್ರಗಳಿಂದ ₹50 ಲಕ್ಷ ಕದ್ದಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದೂ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.