ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸುವವರಿಗೆ ವಿಧಿಸುವ ದಂಡದ ಮೊತ್ತ ಹೆಚ್ಚಳ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಬಿರುಸಿನ ಚರ್ಚೆ ನಡೆಯುತ್ತಿದೆ.
‘ಅಪಘಾತಗಳನ್ನು ತಡೆಗಟ್ಟಿ ಜನರ ಜೀವ ಉಳಿಸಲು ಸರ್ಕಾರದ ನಿರ್ಧಾರ ಸ್ವಾಗತಾರ್ಹ’ ಎಂದು ಕೆಲವರು ಟ್ವೀಟ್ ಮಾಡಿದ್ದಾರೆ. ದಂಡ ಹೆಚ್ಚಳವನ್ನು ಖಂಡಿಸಿರುವ ಹಲವರು, ‘ರಸ್ತೆ ಅಕ್ಕ ಪಕ್ಕದಲ್ಲೇ ಹೊಸದಾದ ಹಾಗೂ ದೊಡ್ಡದಾದ ಎಟಿಎಂಗಳನ್ನು ಸರ್ಕಾರವೇ ಇನ್ಸ್ಟಾಲ್ ಮಾಡಿದೆ’ ಎಂದು ವ್ಯಂಗ್ಯವಾಡಿದ್ದಾರೆ.
ಅಖಿಲೇಶ್ ಆಂಟೋನಿ ಎಂಬುವರು, ‘ಸಂಚಾರ ನಿಯಮಉಲ್ಲಂಘಿಸಿದರೆ ದಂಡ ಹಾಕುತ್ತೀರಾ. ಹದಗೆಟ್ಟ ರಸ್ತೆ ಹಾಗೂ ಗುಂಡಿಗಳು ಬಿದ್ದಿವೆಯಲ್ಲ, ನಿಮ್ಮ ಸರ್ಕಾರಕ್ಕೆ ಎಷ್ಟು ದಂಡ ವಿಧಿಸಬೇಕು’ ಎಂದು ಪ್ರಶ್ನಿಸಿದ್ದಾರೆ.
ಮುಖ್ಯಮಂತ್ರಿಯನ್ನು ಪ್ರಶ್ನಿಸಿದ ನಟಿ: ದಂಡ ಹೆಚ್ಚಳ ಸಂಬಂಧ ಮುಖ್ಯಮಂತ್ರಿ ಅವರನ್ನು ಪ್ರಶ್ನಿಸಿ ಟ್ವೀಟ್ ಮಾಡಿರುವ ನಟಿ ಸೋನುಗೌಡ, ‘ಮುಖ್ಯಮಂತ್ರಿಯವರೇ ದಂಡ ವಿಧಿಸುವ ಮುನ್ನ ದಯವಿಟ್ಟು ಉತ್ತಮ ರಸ್ತೆಗಳನ್ನು ನೀಡಿ. ಸಾಮಾನ್ಯ ಜನ ಕಷ್ಟಪಟ್ಟು ದುಡಿದ ಹಣವನ್ನು ಕಿತ್ತುಕೊಂಡು, ಅವರ ಜೀವನ ಹಾಳು ಮಾಡಬೇಡಿ’ ಎಂದಿದ್ದಾರೆ.
ರಸ್ತೆಯಲ್ಲಿ ಸವಾರರಿಬ್ಬರು ಬೀಳುತ್ತಿರುವ ಫೋಟೊವನ್ನು ಪ್ರಕಟಿಸಿರುವ ನಟಿ, ‘ಸಂಚಾರ ನಿಯಮ ಉಲ್ಲಂಘಿಸಿದರೆ ದಂಡ ವಿಧಿಸುತ್ತೀರಾ. ಗುಂಡಿಗಳನ್ನು ಮುಚ್ಚದ ಸರ್ಕಾರಕ್ಕೆ ಎಷ್ಟು ದಂಡ ವಿಧಿಸಬೇಕು’ ಎಂದು ಪ್ರಶ್ನಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.