ADVERTISEMENT

ಪೊಲೀಸ್ ಮೇಲೆ ಹಲ್ಲೆ ಯತ್ನ: ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2020, 6:29 IST
Last Updated 15 ಅಕ್ಟೋಬರ್ 2020, 6:29 IST

ಬೆಂಗಳೂರು: ಮಾಸ್ಕ್ ಧರಿಸದವರಿಗೆ ದಂಡ ಹಾಕುತ್ತಿದ್ದ ಪೊಲೀಸ್ ಸಿಬ್ಬಂದಿ ಹಾಗೂ ಬಿಬಿಎಂಪಿ ಮಾರ್ಷಲ್‍ಗಳ ಮೇಲೆ ಹಲ್ಲೆ ಯತ್ನ ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಮೂವರನ್ನು ಜಾಲಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಮನೋರಾಯನಪಾಳ್ಯದ ಕಾರ್ಲ್ ಮಾರ್ಕ್ಸ್ (25), ಸಿಂಗಾಪುರ ಬಡಾವಣೆಯ ಶಿವಕುಮಾರ್ (54),
ಎಸ್.ಬಾಬು (40) ಬಂಧಿತರು.

ಎಎಸ್‍ಐ ಅಶ್ವತ್ಥಯ್ಯ, ಕಾನ್‌ಸ್ಟೆಬಲ್‌ ಗುರು ಹಾಗೂ ಪಾಲಿಕೆ ಮಾರ್ಷಲ್ ಮುನಿರಾಜು ಅವರು ಜಾಲಹಳ್ಳಿ ವ್ಯಾಪ್ತಿಯಲ್ಲಿ ಕೋವಿಡ್ ನಿಯಮ ಉಲ್ಲಂಘನೆ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಮಂಗಳವಾರ ಈ ಘಟನೆ ನಡೆದಿದೆ.

ADVERTISEMENT

‘ಗೋಕುಲ ಬ್ರಿಡ್ಜ್ ನ ಹಳೆಯ ರೈಲ್ವೆ ಗೇಟ್ ಬಳಿ ಮಾಸ್ಕ್ ಧರಿಸದೆ ಬಾಬು ಓಡಾಡುತ್ತಿದ್ದ. ಮಾಸ್ಕ್ ಧರಿಸುವಂತೆ ಸಿಬ್ಬಂದಿ ಸೂಚಿಸಿದಾಗ ಗ್ಯಾರೇಜ್‌ನಲ್ಲಿದ್ದ ಶಿವಕುಮಾರ್ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಇದೇ ವೇಳೆ ‘ಕೊರೊನಾ ಬಂದಿಲ್ಲ. ಮಾಸ್ಕ್ ಹಾಕಲ್ಲ’ ಎನ್ನುತ್ತಾ ಕಾರ್ಲ್ ಮಾರ್ಕ್ಸ್ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಕೂಡಲೇ ಮೂವರನ್ನು ಬಂಧಿಸಿ, ಪ್ರಕರಣ ದಾಖಲಿಸಲಾಯಿತು’ ಎಂದು ಮೂಲಗಳು ತಿಳಿಸಿವೆ.

‘ನ್ಯಾಯಾಲಯವು ಆರೋಪಿಗಳನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ. ನಿಯಮ ಮೀರಿದರೆ, ನೀತಿಪಾಠ ಕಠಿಣವಾಗಿರುತ್ತದೆ’ ಎಂದು ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.