ಬೆಂಗಳೂರು: ಭೂಪಸಂದ್ರದಲ್ಲಿ ಹದಿನೈದು ವರ್ಷದ ಬಾಲಕ ಅಡ್ಡಾದಿಡ್ಡಿ ಯಾಗಿ ಕಾರು ಚಲಾಯಿಸಿ ಆಟೊಗೆ ಗುದ್ದಿಸಿದ್ದಾನೆ. ಆಟೊ ಚಾಲಕ ನಾಗಶೆಟ್ಟಿಹಳ್ಳಿಯ ನಾಗರಾಜ್ (47) ಎಂಬುವರು ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ.
ಶುಕ್ರವಾರ ಮಧ್ಯಾಹ್ನ 1.10ಕ್ಕೆ ಈ ಅಪಘಾತ ಸಂಭವಿಸಿದೆ. ಆಟೊದಲ್ಲಿದ್ದ ರುದ್ರನಾಥ್ (68) ಎಂಬುವರು ಗಾಯ ಗೊಂಡಿದ್ದು, ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ.
‘ಬಾಲಕನ ನಿರ್ಲಕ್ಷ್ಯವೇ ಈ ಅಪ ಘಾತಕ್ಕೆ ಕಾರಣ. ಆತನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆತನನ್ನು ಸುಪರ್ದಿಗೆ ಪಡೆದು ಕೌನ್ಸೆಲಿಂಗ್ ನಡೆಸಲಾಗುತ್ತಿದೆ’ ಎಂದು ಆರ್.ಟಿ.ನಗರ ಸಂಚಾರ ಠಾಣೆ ಪೊಲೀಸರು ಹೇಳಿದರು.
ಆಟೊದಲ್ಲಿ ಸಿಲುಕಿದ್ದ ಮೃತದೇಹ: ‘ಸಾಫ್ಟ್ವೇರ್ ಕಂಪನಿಯೊಂದರಲ್ಲಿ ಸೇಲ್ಸ್ ಮ್ಯಾನೇಜರ್ ಆಗಿರುವ ಕಿರಣ್ ಬಾಬಿ ಎಂಬುವರ ಮಗನಾದ ಬಾಲಕ, ತಂದೆಯ ಸ್ವಿಫ್ಟ್ ಕಾರು (ಕೆಎ 31 ಎಂ 5617) ಚಲಾಯಿಸಿಕೊಂಡು ಭೂಪ ಸಂದ್ರಕ್ಕೆ ಬಂದಿದ್ದ. ಕಲ್ಪನಾ ಚಾವ್ಲಾ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿ ಎದುರಿಗಿದ್ದ ಆಟೊಕ್ಕೆ ಡಿಕ್ಕಿ ಹೊಡೆಸಿದ್ದ. ಕಾರು ಆಟೊವನ್ನು ಉಜ್ಜಿಕೊಂಡು ಹೋಗಿತ್ತು’ ಎಂದು ಪೊಲೀಸರು ಹೇಳಿದರು.
‘ಡಿಕ್ಕಿ ರಭಸಕ್ಕೆ ಆಟೊ ಸಂಪೂರ್ಣ ಜಖಂಗೊಂಡಿತ್ತು. ಸ್ಥಳದಲ್ಲೇ ಮೃತಪಟ್ಟ ನಾಗರಾಜ್ ಅವರ ಮೃತದೇಹ ಆಟೊದಲ್ಲೇ ಸಿಲುಕಿಕೊಂಡಿತ್ತು. ಸ್ಥಳೀಯರೇ ಮೃತದೇಹವನ್ನು ಹೊರಗೆ ತೆಗೆದಿದ್ದಾರೆ. ಆಟೊದ ಹಿಂಬದಿ ಸೀಟಿನಲ್ಲಿದ್ದ ರುದ್ರನಾಥ್ ಅವರಿಗೂ ತೀವ್ರ ಗಾಯವಾಗಿದೆ’ ಎಂದು ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.