ADVERTISEMENT

ಪ್ರಯಾಣಿಕರ ಬ್ಯಾಗ್ ಕದ್ದೊಯ್ದಿದ್ದ ಚಾಲಕ ಬಂಧನ

​ಪ್ರಜಾವಾಣಿ ವಾರ್ತೆ
Published 30 ಜನವರಿ 2023, 17:39 IST
Last Updated 30 ಜನವರಿ 2023, 17:39 IST

ಬೆಂಗಳೂರು: ಪ್ರಯಾಣಿಕರೊಬ್ಬರ ಬ್ಯಾಗ್ ಕಳ್ಳತನ ಮಾಡಿದ್ದ ಆರೋಪದಡಿ ಆಟೊ ಚಾಲಕ ಆರ್‌. ರಂಗಸ್ವಾಮಿ (43) ಅವರನ್ನು ಮಲ್ಲೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ತ್ಯಾಗರಾಜನಗರದ ರಂಗಸ್ವಾಮಿ, ಅನಿವಾಸಿ ಭಾರತೀಯರೊಬ್ಬರ ಬ್ಯಾಗ್ ಕದ್ದೊಯ್ದಿದ್ದ. ಈ ಬಗ್ಗೆ ದಾಖಲಾಗಿದ್ದ ಪ್ರಕರಣದ ತನಿಖೆ ಕೈಗೊಂಡು ರಂಗಸ್ವಾಮಿಯನ್ನು ಬಂಧಿಸಲಾಗಿದೆ. ₹ 1.50 ಲಕ್ಷ ನಗದು, ದಾಖಲೆಗಳು ಹಾಗೂ ಆಟೊ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ವಿದೇಶದಲ್ಲಿ ನೆಲೆಸಿರುವ ದೂರುದಾರ, ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದರು. ಜ. 24ರಂದು ತ್ಯಾಗರಾಜನಗರದಿಂದ ಮಲ್ಲೇಶ್ವರದ 7ನೇ ಅಡ್ಡರಸ್ತೆಯಲ್ಲಿರುವ ಆಸ್ಪತ್ರೆಗೆ ರಂಗಸ್ವಾಮಿ ಆಟೊದಲ್ಲಿ ಪ್ರಯಾಣಿಸಿದ್ದರು. ಹಣ ಹಾಗೂ ದಾಖಲೆಗಳಿದ್ದ ಬ್ಯಾಗ್ ಆಟೊದಲ್ಲಿಟ್ಟಿದ್ದ ದೂರುದಾರ, ‘ಆಸ್ಪತ್ರೆಯೊಳಗೆ ಹೋಗಿ ಬರುತ್ತೇನೆ. ಸ್ವಲ್ಪ ಸಮಯ ಕಾಯಿರಿ. ವಾಪಸು ತ್ಯಾಗರಾಜನಗರಕ್ಕೆ ಹೋಗೋಣ’ ಎಂಬುದಾಗಿ ಹೇಳಿ ಆಸ್ಪತ್ರೆಯೊಳಗೆ ಹೋಗಿದ್ದರು.’

ADVERTISEMENT

‘20 ನಿಮಿಷ ನಂತರ ದೂರದಾರ ಆಸ್ಪತ್ರೆಯಿಂದ ಹೊರಬಂದಿದ್ದರು. ಆದರೆ, ಸ್ಥಳದಲ್ಲಿ ಆಟೊ ಇರಲಿಲ್ಲ. ಬ್ಯಾಗ್ ಸಮೇತ ಚಾಲಕ ಪರಾರಿಯಾಗಿದ್ದರು’ ಎಂದು ಪೊಲೀಸರು ತಿಳಿಸಿದರು.

ಸಾಲ ತೀರಿಸಲು ಕೃತ್ಯ: ‘ನೋಂದಣಿ ಸಂಖ್ಯೆ ಆಧರಿಸಿ ಆಟೊ ಪತ್ತೆ ಮಾಡಿ ರಂಗಸ್ವಾಮಿಯನ್ನು ಬಂಧಿಸಲಾಗಿದೆ. ತಾನು ಮಾಡಿದ್ದ ಸಾಲ ತೀರಿಸುವುದಕ್ಕಾಗಿ ಕೃತ್ಯ ಎಸಗಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ’ ಎಂದು ಪೊಲೀಸರು ಹೇಳಿದರು.

‘ಕೆಲ ಯುವಕರಿಗೆ ಉದ್ಯೋಗ ಹಾಗೂ ನಾನಾ ಆಮಿಷವೊಡ್ಡಿದ್ದ ರಂಗಸ್ವಾಮಿ, ಅವರಿಂದ ಸಾಲ ಪಡೆದಿದ್ದ. ಆದರೆ, ಯಾವುದೇ ಉದ್ಯೋಗ ಕೊಡಿಸಿರಲಿಲ್ಲ. ಅವರು ಹಣ ವಾಪಸು ಕೇಳಿದ್ದರು. ಅವರಿಗೆ ಹಣ ಕೊಡಲು ಆರೋಪಿ ದೂರುದಾರರ ಬ್ಯಾಗ್ ಕದ್ದಿದ್ದ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.