ಬೆಂಗಳೂರು: ಓಲಾ, ಉಬರ್ ಮತ್ತು ರ್ಯಾಪಿಡೊ ಕಂಪನಿಗಳು ಆಟೊರಿಕ್ಷಾ ಸೇವೆ ಮುಂದುವರಿಸಿದ್ದು, ಇತ್ತ ಆ್ಯಪ್
ಆಧಾರಿತ ಸೇವೆ ಒದಗಿಸುತ್ತಿದ್ದ ಆಟೊರಿಕ್ಷಾ ಚಾಲಕರಿಗೆ ಸಾರಿಗೆ ಇಲಾಖೆ ಅಧಿಕಾರಿಗಳು ದಂಡ ವಿಧಿಸಿದರು. ಇದರಿಂದ ಆಕ್ರೋಶಗೊಂಡ ಚಾಲಕರು ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ಬೇಡಿಕೆ ಆಧಾರಿತ ಸಾರಿಗೆ ತಂತ್ರಜ್ಞಾನ ನಿಯಮ –2016 ಪ್ರಕಾರ ಟ್ಯಾಕ್ಸಿ ಸೇವೆ ಒದಗಿಸುತ್ತಿರುವ
ಕಂಪನಿಗಳು ರಿಕ್ಷಾ ಸೇವೆ ನೀಡುವಂತಿಲ್ಲ. ಕೂಡಲೇ ಈ ಸೇವೆ ಸ್ಥಗಿತಗೊಳಿಸಬೇಕು ಎಂದು ಮೂರು ಕಂಪನಿಗಳಿಗೆ ಅ.6ರಂದು ಸಾರಿಗೆ ಇಲಾಖೆ ನೋಟಿಸ್ ನೀಡಿತ್ತು. ಸಾರಿಗೆ ಇಲಾಖೆ ನಿಗದಿಪಡಿಸಿರುವ ದರಕ್ಕಿಂತ ಹೆಚ್ಚಿನ ದರ ವಸೂಲಿ ಮಾಡಬಾರದು ಎಂದೂ ನೋಟಿಸ್ನಲ್ಲಿ ತಿಳಿಸಿತ್ತು.
ಆದರೆ, ಆಟೊರಿಕ್ಷಾ ಸೇವೆ ಮತ್ತು ದುಬಾರಿ ದರ ವಸೂಲಿ ಸೋಮ ವಾರವೂ ಮುಂದುವರಿದಿತ್ತು. ಆ್ಯಪ್ ಆಧಾರಿತ ಸೇವೆ ಒದಗಿಸುತ್ತಿದ್ದ ಆಟೊರಿಕ್ಷಾಗಳನ್ನು ಸೋಮವಾರ ಸಾರಿಗೆ ಇಲಾಖೆ ಅಧಿಕಾರಿಗಳು ಅಲ್ಲಲ್ಲಿ ಅಡ್ಡಗಟ್ಟಿದಂಡ ವಿಧಿಸಿದರು. ನಗರದ ಹಲವೆಡೆ
ಕಾರ್ಯಾಚರಣೆ ನಡೆಸಿ, ಕೆಲ ಆಟೊಗಳನ್ನು ಜಪ್ತಿ ಮಾಡಿದರು.
ಕೆ.ಆರ್.ಪುರ, ಎಲೆಕ್ಟ್ರಾನಿಕ್ ಸಿಟಿ, ಜಯನಗರ, ರಾಜಾಜಿನಗರ ಸೇರಿ ಹಲವೆಡೆ ಆ್ಯಪ್ ಬಳಕೆ ಮಾಡಿ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಆಟೊರಿಕ್ಷಾಗಳನ್ನು ತಡೆದು ದಂಡ ವಿಧಿಸಿದರು. ಕೆಲವೆಡೆ ಸಾರಿಗೆ ಅಧಿಕಾರಿಗಳು ಪ್ರಯಾ
ಣಿಕರ ಸೋಗಿನಲ್ಲಿ ಓಲಾ ಮತ್ತು ಉಬರ್ ಆ್ಯಪ್ ಮೂಲಕ ಆಟೊರಿಕ್ಷಾಗಳನ್ನು ಕಾಯ್ದಿರಿಸಿದರು. ಪ್ರಯಾಣಿಕರೆಂದು ಭಾವಿಸಿ ಹತ್ತಿಸಿಕೊಳ್ಳಲು ಬಂದ ಆಟೊ ಚಾಲಕರನ್ನು ಹಿಡಿದು ದಂಡ ಹಾಕಿದರು.
‘ಆ್ಯಪ್ಗಳನ್ನು ಬಳಕೆ ಮಾಡದಂತೆ ಸೂಚಿಸಿದ್ದರೂ, ಬಳಕೆ ಮಾಡುತ್ತಿದ್ದಾರೆ. ನಿಯಮ ಉಲ್ಲಂಘಿಸಿದವರಿಗೆ ಸಾರಿಗೆ ಆಯುಕ್ತರ ಸೂಚನೆಯಂತೆ ದಂಡ ವಿಧಿಸಲಾಗುತ್ತಿದೆ’ ಎಂದು ಇಲಾಖೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.