ಬೆಂಗಳೂರು: ಅಜೀಂ ಪ್ರೇಮ್ಜೀ ವಿಶ್ವ ವಿದ್ಯಾಲಯದ ಡೆವಲಪ್ಮೆಂಟ್ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿ, ಮಹಾರಾಷ್ಟ್ರದ ಅಭಿಜಿತ್ (26) ಎಂಬುವವರು ಕಾಲೇಜು ಆವರಣದಲ್ಲಿ ಶುಕ್ರವಾರ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ವಿದ್ಯಾರ್ಥಿಗಳ ಆಕ್ರೋಶ: ‘ಹಾಸ್ಟೆಲ್ನಿಂದ ಕಾಲೇಜಿಗೆ ಬರಲು ಕಲ್ಪಿಸಿದ್ದ ಬಸ್ ಶುಲ್ಕ ಹೆಚ್ಚಳವನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿ
ದ್ದೇವೆ. ವಿ.ವಿಯ ಆಡಳಿತ ಮಂಡಳಿ ಶುಲ್ಕ ಇಳಿಸದ ಕಾರಣಕ್ಕೆ ಪ್ರತಿಭಟನೆ ತೀವ್ರಗೊಳಿಸಿದ್ದೆವು. ಮೂರು ದಿನಗಳಿಂದ
ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದೆವು. ಈ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದ ಅಭಿಜಿತ್ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಅಭಿಜಿತ್
ಸಾವಿಗೆ ವಿ.ವಿ ಆಡಳಿತ ಮಂಡಳಿ ನಿರ್ಲಕ್ಷ್ಯವೇ ಕಾರಣ’ ಎಂದು ಪ್ರತಿಭಟನ ನಿರತ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ವಿ.ವಿ ಸ್ಪಷ್ಟನೆ: ‘ವಿದ್ಯಾರ್ಥಿ ಸಾವು ಪ್ರಕರಣ ದುರದೃಷ್ಟಕರ. ಘಟನೆಯಿಂದ ನಾವೂ ಆಘಾತಕ್ಕೆ ಒಳಗಾಗಿದ್ದೇವೆ. ಶುಕ್ರವಾರ ನಡೆಯುತ್ತಿದ್ದ ವಾರ್ಷಿಕೋತ್ಸವದಲ್ಲಿ ಇತರೆ ವಿದ್ಯಾರ್ಥಿಗಳ ಜತೆಗೆ ಅಭಿಜಿತ್ ನೃತ್ಯ ಪ್ರದರ್ಶಿಸುತ್ತಿದ್ದರು. ಆ ವೇಳೆ ಅಲ್ಲಿಯೇ ಕುಸಿದುಬಿದ್ದಿರು. ತಕ್ಷಣವೇ ವೈದ್ಯಕೀಯ ಚಿಕಿತ್ಸೆ ಕೊಡಿಸಿದರೂ ಅವರು ಬದುಕುಳಿಯಲಿಲ್ಲ. ಈ ವಿದ್ಯಾರ್ಥಿ ಗುರುವಾರ ಹಾಗೂ ಶುಕ್ರವಾರ ಯಾವುದೇ ಪ್ರತಿಭಟನೆಯಲ್ಲಿ ಪಾಲ್ಗೊಂಡಿರಲಿಲ್ಲ’ ಎಂದು ವಿ.ವಿ ಅಡಳಿತ ಮಂಡಳಿ ಸ್ಪಷ್ಟನೆ ನೀಡಿದೆ.
‘ಬುಧವಾರ ಸಂಜೆಯೇ ಅಭಿಜಿತ್ ಪ್ರತಿಭಟನಾ ಸ್ಥಳದಿಂದ ವಾಪಸ್ ಆಗಿದ್ದರು’ ಎಂದು ತಿಳಿಸಿದೆ.
‘ಕುಸಿದು ಬಿದ್ದ ಬಳಿಕವೇ ಕಾಲೇಜು ವೈದ್ಯರು ಚಿಕಿತ್ಸೆ ನೀಡಿದರು. ಬಳಿಕ ಆಂಬುಲೆನ್ಸ್ನಲ್ಲಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿನ ವೈದ್ಯರೂ ಸಾಕಷ್ಟು ಪ್ರಯತ್ನ ಹಾಕಿದರು. ಈ ಘಟನೆಗೂ ಪ್ರತಿಭಟನೆಗೂ ಸಂಬಂಧ ಇಲ್ಲ. ಅಸಮಂಜಸ ಕಾರಣಕ್ಕೆ ಪ್ರತಿಭಟನೆ ನಡೆಯುತ್ತಿದೆ’ ಎಂದು ಸ್ಪಷ್ಟನೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.