ಬೆಂಗಳೂರು: ಬೈಯಪ್ಪನಹಳ್ಳಿಯಲ್ಲಿರುವ ಸರ್ ಎಂ.ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್ನಲ್ಲಿ (ಎಸ್ಎಂವಿಟಿ) ಪ್ರಯಾಣಿಕರೊಬ್ಬರು ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ, ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.
ಅರ್ಚನಾ ಕುಮಾರಿ ಮಗುವಿಗೆ ಜನ್ಮ ನೀಡಿದವರು. ಅವರು ಜಾರ್ಖಂಡ್ನ ಹಟಿಯಾಗೆ ಮಂಗಳವಾರ ತೆರಳಲು ಎಸ್ಎಂವಿಟಿಗೆ ಬಂದಿದ್ದರು. ‘ಎಸ್ಎಂವಿಟಿ ಬೆಂಗಳೂರು–ಹಟಿಯಾ ಎಕ್ಸ್ಪ್ರೆಸ್’ ರೈಲಿಗೆ ಕಾಯುತ್ತಿದ್ದಾಗ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಅಲ್ಲಿ ಕರ್ತವ್ಯದಲ್ಲಿದ್ದ ರೈಲ್ವೆ ಸಿಬ್ಬಂದಿ ಆರ್.ವಿ. ಸುರೇಶ್ಬಾಬು ನೆರವಿಗಾಗಿ ಮಾಹಿತಿ ರವಾನಿಸಿದ್ದರು.
ರೈಲ್ವೆ ಪ್ರೊಟೆಕ್ಷನ್ ಫೋರ್ಸ್ನ (ಆರ್ಪಿಎಫ್) ಅಮೃತಾ ಮತ್ತು ಇತರ ಸಿಬ್ಬಂದಿ ಸೇರಿ ಮಹಿಳಾ ಪ್ರಯಾಣಿಕರ ನೆರವಿನೊಂದಿಗೆ ಪ್ರತ್ಯೇಕ ಕೊಠಡಿಗೆ ಒಯ್ದರು. ಕೆಲವೇ ನಿಮಿಷದಲ್ಲಿ ಹೆರಿಗೆಯಾಗಿದೆ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಆಂಬುಲೆನ್ಸ್ಗೆ ಕರೆ ಮಾಡಲಾಗಿತ್ತು. ಆಂಬುಲೆನ್ಸ್ ಬರುವ ಮೊದಲೇ ಹೆರಿಗೆಯಾಯಿತು. ತಾಯಿ ಮತ್ತು ಮಗುವನ್ನು ಆಂಬುಲೆನ್ಸ್ನಲ್ಲಿ ಇಂದಿರಾನಗರದ ಸಿ.ವಿ. ರಾಮನ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಆರೋಗ್ಯವಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ನೈರುತ್ಯ ರೈಲ್ವೆಯ ಬೆಂಗಳೂರು ವಿಭಾಗೀಯ ಕಚೇರಿಯ ‘ಎಕ್ಸ್’ ಖಾತೆಯಲ್ಲಿ ಹೆರಿಗೆ ವಿಚಾರವನ್ನು ಹಂಚಿಕೊಳ್ಳಲಾಗಿದ್ದು, ‘ಬೆಂಗಳೂರು ಎಸ್ಎಂವಿಟಿ ನಿಲ್ದಾಣದಲ್ಲಿ ಶುಕ್ರವಾರ ಗರ್ಭಿಣಿಯೊಬ್ಬರು ಆರೋಗ್ಯವಂತ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಹಿಳಾ ಸಿಬ್ಬಂದಿ ಮತ್ತು ಸಹ ಪ್ರಯಾಣಿಕರು ಸಕಾಲಿಕ ಬೆಂಬಲ ನೀಡಿದರು. ನಂತರ ಹೆಚ್ಚಿನ ಆರೈಕೆಗಾಗಿ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಭಾರತೀಯ ರೈಲ್ವೆ ಪ್ರಯಾಣಿಕರ ಯೋಗಕ್ಷೇಮಕ್ಕೆ ಬದ್ಧವಾಗಿದೆ’ ಎಂದು ತಿಳಿಸಲಾಗಿದೆ.
ಅರ್ಚನಾ ಮತ್ತು ಅವರ ಪತಿ ನಿಶಾಂಕ್ ಕುಮಾರ್ ಅವರು ಸಕಾಲಿಕವಾಗಿ ನೆರವಾದ ರೈಲ್ವೆ ಅಧಿಕಾರಿಗಳು, ಸಿಬ್ಬಂದಿ ಮತ್ತು ಮಹಿಳಾ ಪ್ರಯಾಣಿಕರಿಗೆ ಕೃತಜ್ಞತೆ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.