ಬೆಂಗಳೂರು: ಪೂರ್ಣ ಪ್ರಮಾಣದಲ್ಲಿ 2ಎ ಮೀಸಲಾತಿಗೆ ಒತ್ತಾಯಿಸಿ ಸೋಮವಾರ(ಡಿ.5) ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಲು ಕರ್ನಾಟಕ ರಾಜ್ಯ ಸಮಗ್ರ ಬಲಿಜ ವೇದಿಕೆ ನಿರ್ಧರಿಸಿದೆ.
‘ಬಲಿಜ ಹಾಗೂ ಅದರ ಉಪಜಾತಿಗಳು ಆರ್ಥಿಕ ಮತ್ತು ಸಾಮಾಜಿಕವಾಗಿಅತ್ಯಂತ ಹಿಂದುಳಿದ ಸಮುದಾಯಗಳಾಗಿದ್ದು, ಸದ್ಯ ಶಿಕ್ಷಣಕ್ಕೆ 2ಎ ಮೀಸಲಾತಿ ಕಲ್ಪಿಸಲಾಗಿದೆ. ಉದ್ಯೋಗದ ವಿಷಯದಲ್ಲಿ 3ಎ ಪಟ್ಟಿಯಲ್ಲಿ ಉಳಿಸಲಾಗಿದ್ದು, ರಾಜಕೀಯ ಮೀಸಲಾತಿಯೂ ಇಲ್ಲವಾಗಿದೆ. ನಮ್ಮಿಂದ ಕಸಿದುಕೊಂಡಿರುವ 2ಎ ಮೀಸಲಾತಿಯನ್ನು ಮತ್ತೆ ನೀಡಬೇಕು’ ಎಂದು ವೇದಿಕೆ ಒತ್ತಾಯಿಸಿದೆ.
ಬಲಿಜ ಸಮುದಾಯದ ಬಹುತೇಕರು ಅರಿಶಿನ–ಕುಂಕುಮ, ಬಳೆ, ಹೂವು, ಎಲೆ–ಅಡಿಕೆ ಮಾರಾಟ ರೀತಿಯ ಬೀದಿ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. 2ಎ ಮೀಸಲಾತಿ ನೀಡುವ ಮೂಲಕ ಉದ್ಯೋಗ ಮತ್ತು ರಾಜಕೀಯದಲ್ಲಿ ಮೀಸಲಾತಿ ಸಿಗುವಂತೆ ಮಾಡಬೇಕು. ಈ ಸಮುದಾಯದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಕರ್ನಾಟಕ ಬಲಿಜ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದು ಆಗ್ರಹಿಸಿದೆ.
ಬಲಿಜ ಸಮುದಾಯದ ಸ್ಥಿತಿಗತಿ ಬಗ್ಗೆ ಅಧ್ಯಯನ ನಡೆಸಿ ಅಗತ್ಯ ಮಾಹಿತಿಗಳನ್ನು ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಪಡೆದುಕೊಂಡಿದೆ. ಆದರೆ, ಸರ್ಕಾರಕ್ಕೆ ವರದಿ ಸಲ್ಲಿಸಿಲ್ಲ. ಇದರಿಂದ ಸಾಮಾಜಿಕ ನ್ಯಾಯ ಸಿಗುವಲ್ಲಿ ಹಿನ್ನೆಡೆಯಾಗಿದೆ. ಸರ್ಕಾರ ಕೂಡ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಎಲ್ಲಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಾಗುತ್ತಿದೆ’ ಎಂದು ವೇದಿಕೆ ಅಧ್ಯಕ್ಷ ಎನ್.ಪಿ. ಮುನಿಕೃಷ್ಣ ಮತ್ತು ಪ್ರಧಾನ ಕಾರ್ಯದರ್ಶಿ ಎಸ್.ರಮೇಶ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.