ಕೆ.ಆರ್.ಪುರ: ವರ್ತೂರಿನ ದಿ ಗ್ರೀನ್ ಸ್ಕೂಲ್– ಬೆಂಗಳೂರು (ಟಿಜಿಎಸ್– ಬಿ) ಶಾಲೆ ತನ್ನ ‘ಬ್ಯಾಂಬೂ 4 ಬೆಂಗಳೂರು’ ಕಾರ್ಯಕ್ರಮದ ಭಾಗವಾಗಿ ವಿದ್ಯಾರ್ಥಿಗಳಿಗಾಗಿ ಬಿದಿರಿನ ಬೈಸಿಕಲ್ಗಳನ್ನು ತಯಾರಿಸಿದೆ.
ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಸಚಿವ ಈಶ್ವರ್ ಖಂಡ್ರೆ ಅವರು ಬಿದಿರನ ಸೈಕಲ್ಗಳಲ್ಲಿ ಸಂಚರಿಸುವ ಮೂಲಕ ‘ಬ್ಯಾಂಬೂ 4 ಬೆಂಗಳೂರು’ ಕಾರ್ಯಕ್ರಮವನ್ನು ಶುಕ್ರವಾರ ಉದ್ಘಾಟಿಸಿದರು.
ಶಾಲಾ ಆವರಣದಲ್ಲಿ 8 ಮತ್ತು 9 ನೇ ತರಗತಿ ವಿದ್ಯಾರ್ಥಿಗಳೊಂದಿಗೆ ಬಿದಿರಿನ ಬೈಸಿಕಲ್ ಸವಾರಿ ಮಾಡಿದ ನಂತರ ಮಾತನಾಡಿದ ಈಶ್ವರ್ ಖಂಡ್ರೆ, ‘ಇದು ವಿದ್ಯಾರ್ಥಿಗಳನ್ನು ಪ್ರಕೃತಿಗೆ ಹತ್ತಿರವಾಗಿಸುವ ಉತ್ತಮ ಮಾರ್ಗ’ ಎಂದರು.
‘ಬಿದಿರು ಹೆಚ್ಚಿನ ಸಾಮರ್ಥ್ಯದ ಶಕ್ತಿ ಹೊಂದಿದೆ. ಬಿದಿರಿನ ಬೈಸಿಕಲ್ಗಳು 20ರಿಂದ 30 ವರ್ಷಗಳವರೆಗೆ ಬಾಳಿಕೆ ಬರುತ್ತವೆ. ಭಾರತದ ಪ್ರಥಮ ಜೀರೋ ಕಾರ್ಬನ್ ಶಾಲೆಯಾಗಿ, ನಾವು ಈ ಪರಿಸರಸ್ನೇಹಿ ಉಪಕ್ರಮವನ್ನು ಕೈಗೊಂಡಿದ್ದೇವೆ. ಬಿದಿರಿನ ಕಾರ್ಯಸಾಧ್ಯತೆಯನ್ನು ಅನ್ವೇಷಿಸಲು, ಬಿದಿರಿನಿಂದ ಮಾಡಿದ ಸುಮಾರು 6 ಸೈಕಲ್ಗಳನ್ನು ಸಿದ್ಧಪಡಿಸಿದ್ದೇವೆ’ ಎಂದು ಟಿಜಿಎಸ್– ಬಿ ಪ್ರಾಂಶುಪಾಲೆ ಉಷಾ ಅಯ್ಯರ್ ಮಾಹಿತಿ ನೀಡಿದರು.
ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ, ಭಾರತೀಯ ಬಿದಿರು ಸೊಸೈಟಿ ಅಧ್ಯಕ್ಷ ಪುನಾಟಿ, ಅರಣ್ಯ ಪಡೆ ಮುಖ್ಯಸ್ಥ ಬ್ರಿಜೇಶ್ ಕುಮಾರ್ ದೀಕ್ಷಿತ್, ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಪ್ರಭಾಶ್ ಚಂದ್ರ ರೇ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.