ADVERTISEMENT

‘ಕುರ್ಬಾನಿ’ ನಿಷೇಧಕ್ಕೆ ಬಿಜೆಪಿ, ಬಜರಂಗ ದಳ ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2019, 20:01 IST
Last Updated 6 ಆಗಸ್ಟ್ 2019, 20:01 IST

ಬೆಂಗಳೂರು: ರಾಜ್ಯದಲ್ಲಿ ಗೋವುಗಳು ಸೇರಿದಂತೆ ಎಲ್ಲ ಪ್ರಾಣಿಗಳ ಬಲಿ ನಿಷೇಧ ಕಾಯ್ದೆ ಜಾರಿ ಇರುವುದರಿಂದ ಆ.11 ರಂದು ಬಕ್ರೀದ್‌ ಸಂದರ್ಭದಲ್ಲಿ ‘ಕುರ್ಬಾನಿ’ಗೆ ಅವಕಾಶ ನೀಡಬಾರದು ಎಂದು ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರಿಗೆಬಿಜೆಪಿ ಮನವಿ ಮಾಡಿದೆ.

ಬಕ್ರೀದ್‌ ದಿನ ಪ್ರಾಣಿಗಳ ಶೇಖರಣೆ ಮತ್ತು ಸಾಗಣೆಗೆ ಅವಕಾಶ ನೀಡಬಾರದು. ರಾಜ್ಯದಲ್ಲಿ ಎಲ್ಲ ಪ್ರಾಣಿಗಳ ಬಲಿಯನ್ನು ನಿಷೇಧಿಸಿ ‘ಕರ್ನಾಟಕ ಬಲಿ ನಿಷೇಧ ಕಾಯಿದೆ 1959’ ರಿಂದ ಜಾರಿಯಲ್ಲಿದೆ. ಈ ಕಾನೂನು 1959 ರಲ್ಲಿ ಹಿಂದುಗಳಿಗೆ ಮಾತ್ರ ಅನ್ವಯವಾಗಿತ್ತು. ಆದರೆ, 1975 ರಲ್ಲಿ ಅದನ್ನು ಎಲ್ಲ ಧರ್ಮದವರಿಗೂ ಅನ್ವಯಿಸುವಂತೆ ತಿದ್ದುಪಡಿ ಮಾಡಿರುವುದರಿಂದ ಬಕ್ರೀದ್‌ ದಿನ ಕುರ್ಬಾನಿ ಕೊಡುವುದಕ್ಕೂ ನಿಷೇಧ ಅನ್ವಯವಾಗುತ್ತದೆ ಎಂದು ವಿಧಾನಪರಿಷತ್‌ ಸದಸ್ಯ ಎನ್‌.ರವಿಕುಮಾರ್ ಹೇಳಿದ್ದಾರೆ.

ಕರ್ನಾಟಕದಲ್ಲಿ ಗೋಹತ್ಯಾ ನಿಷೇಧ ಜಾರಿಯಲ್ಲಿದ್ದು, ಯಾವುದೇ ಕಾರಣಕ್ಕೂ ಗೋವುಗಳ ಕಳ್ಳತನ, ಅಕ್ರಮ ಸಾಗಾಣಿಕೆ ಮತ್ತು ಹತ್ಯೆ ಆಗದಂತೆ ತಡೆಯುವ ನಿಟ್ಟಿನಲ್ಲಿ ಸೂಕ್ತ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ADVERTISEMENT

ಬಜರಂಗದಳ ಎಚ್ಚರಿಕೆ: ಬಕ್ರೀದ್‌ ಸಂದರ್ಭದಲ್ಲಿ ಅಕ್ರಮ ಗೋ ಸಾಗಣೆ ಮಾಡಿದರೆ ಅದರ ವಿರುದ್ಧ ರಾಜ್ಯದಾದ್ಯಂತ ಹೋರಾಟ ನಡೆಸುವುದಾಗಿ ಬಜರಂಗದಳ ಪ್ರಾಂತ ಸಹಸಂಯೋಜಕ ರಘು ಸಕಲೇಶಪುರ ತಿಳಿಸಿದ್ದಾರೆ.

ಶಾಸಕ ತನ್ವೀರ್‌ ಸೇಠ್‌ ಅವರು ಆರು ಜನ ಮುಸ್ಲಿಂ ಶಾಸಕರ ಜತೆ ಸೇರಿ ಬಲಿಗಾಗಿ ಪ್ರಾಣಿಗಳ ಸಾಗಣೆ ಮತ್ತು ಅದಕ್ಕೆ ಭದ್ರತೆ ನೀಡಬೇಕು ಎಂದು ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದಾರೆ. ಇದು ಕಾನೂನಿಗೆ ವಿರುದ್ಧ. ಅಲ್ಲದೆ, ಇವರು ಕೇವಲ ಮುಸ್ಲಿಂ ಓಟುಗಳಿಂದ ಮಾತ್ರ ಗೆದ್ದು ಬಂದಿಲ್ಲ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.