ಬೆಂಗಳೂರು: ‘ಈ ವರ್ಷದ ಮಾರ್ಚ್ 27ರಂದು ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ. ಈ ಬಾರಿ 100ಕ್ಕಿಂತಲೂ ಹೆಚ್ಚು ಜೋಡಿಗಳು ಹಸೆಮಣೆ ಏರಲಿವೆ’ ಎಂದು ಬನಶಂಕರಿ ಸಾಮೂಹಿಕ ವಿವಾಹ ವೇದಿಕೆ ಅಧ್ಯಕ್ಷ ಎ.ಎಚ್.ಬಸವರಾಜು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ‘ಪ್ರತಿಬಾರಿಯಂತೆ ಈ ಸಲವೂ ಬನಶಂಕರಿ ದೇವಿಯ ಸನ್ನಿಧಾನದಲ್ಲಿ ವಿವಾಹ ಮಹೋತ್ಸವ ನಡೆಯಲಿದೆ. 22 ವರ್ಷಗಳಿಂದ ಈ ಉಚಿತ ವಿವಾಹ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ. ಈವರೆಗೆ 1,231ಕ್ಕೂ ಹೆಚ್ಚು ಜೋಡಿ ವೈವಾಹಿಕ ಬದುಕಿಗೆ ಕಾಲಿಡಲು ವೇದಿಕೆಯು ನೆರವಾಗಿದೆ’ ಎಂದರು.
‘ಜಾತಿ, ಮತ, ಬೇಧವಿಲ್ಲದೆ ಎಲ್ಲಾ ವರ್ಗದ ಜನರೂ ಒಂದೇ ಮಂಟಪದಲ್ಲಿ ತಮ್ಮಿಷ್ಟದವರನ್ನು ವರಿಸಲಿದ್ದಾರೆ. ಸಮಾರಂಭದಲ್ಲಿ ಹಾಜರಿರುವ ಮಠಾಧೀಶರು ನವಜೋಡಿಗೆ ಶುಭ ಹಾರೈಸಲಿದ್ದಾರೆ. ಈ ಬಾರಿ ಕೇರಳ, ಗೋವಾ, ತಮಿಳುನಾಡು ಹಾಗೂ ಇತರ ರಾಜ್ಯಗಳ ಜೋಡಿಗಳೂ ಪಾಲ್ಗೊಳ್ಳಲಿದ್ದಾರೆ. ಹೋದ ವರ್ಷ 70ಕ್ಕಿಂತಲೂ ಹೆಚ್ಚು ಜೋಡಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವು. ಮಾರ್ಚ್ 27ರಂದು ಬೆಳಿಗ್ಗೆ 7.40ರಿಂದ 9.15ರವರೆಗಿನ ಮೇಷ ಲಗ್ನದಲ್ಲಿ ಸಾಮೂಹಿಕ ವಿವಾಹ ನಡೆಸಲಾಗುತ್ತದೆ’ ಎಂದು ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.