ಬೆಂಗಳೂರು: ಚಿಣ್ಣರು ಆ ಕೆರೆಯ ಸುತ್ತ ಓಡಾಡಿದರು, ಚಿತ್ರ ಬಿಡಿಸಿದರು, ಸಸಿ ನೆಟ್ಟರು... ದಿನವಿಡೀ ಖುಷಿ ಪಟ್ಟರು.
ಬೆಂಗಳೂರು ಪ್ರತಿಷ್ಠಾನವು ವಿವಿಧ ಶಾಲೆಗಳು ಹಾಗೂ ಸ್ಥಳೀಯ ಸಂಸ್ಥೆಗಳೊಂದಿಗೆ ಸೇರಿ ಜೋಗಿ
ಕೆರೆಯಂಗಳದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಮಕ್ಕಳ ಕೆರೆ ಹಬ್ಬ’ ಮಕ್ಕಳಿಗೆ ವಿಶಿಷ್ಟ ಅನುಭವವನ್ನು ಕಟ್ಟಿಕೊಟ್ಟಿತು.
ಶಾಲಾ–ಕಾಲೇಜು ಮಕ್ಕಳನ್ನು ಕೆರೆ ಆವರಣಕ್ಕೆ ಕರೆಸಿ, ಅದರ ಇತಿಹಾಸದ ಕುರಿತು ತಿಳಿಸಲಾಯಿತು.
ಹಬ್ಬದಲ್ಲಿ ಪ್ರಬಂಧ ಮತ್ತು ರಸಪ್ರಶ್ನೆ ಸ್ಪರ್ಧೆ ಇತ್ಯಾದಿ ಸ್ಪರ್ಧೆಗಳನ್ನು ಹಮ್ಮಿಕೊಳ್ಳುವ ಮೂಲಕ ಮಕ್ಕಳಲ್ಲಿ ಕೆರೆಯ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲಾಯಿತು.
ಕೆರೆಯ ಪರಂಪರೆ, ಸಮುದಾಯದಲ್ಲಿ ಅವುಗಳ ಪಾತ್ರ, ಕೆರೆ ಪುನರುಜ್ಜೀವನದಿಂದ ಆಗುವ ಪ್ರಯೋಜನಗಳ ಕುರಿತು ಮಕ್ಕಳು ವಿವಿಧ ಚಟುವಟಿಕೆಗಳ ಮೂಲಕ ತಿಳಿವಳಿಕೆ ಪಡೆದರು.
ಪ್ರತಿಷ್ಠಾನದ ಪ್ರಧಾನ ವ್ಯವಸ್ಥಾಪಕ ಹರೀಶ್ ಕುಮಾರ್ ಮಾತನಾಡಿ, ‘ಬೆಂಗಳೂರಿನ ಕೆರೆಗಳನ್ನು ಇಂದು ತ್ಯಾಜ್ಯ ಸುರಿಯಲು, ಕೊಳಚೆ ನೀರು ಹರಿಸಲು ಬಳಸಲಾಗುತ್ತಿದೆ. ಕೆರೆ ಒತ್ತುವರಿ ಸಾಮಾನ್ಯವಾಗಿದೆ. ಕೆರೆಗಳು ಮಲಿನಗೊಂಡಷ್ಟೂ ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಕಟ್ಟಿಟ್ಟ ಬುತ್ತಿ. ಅವುಗಳನ್ನು ಸಂರಕ್ಷಿಸಿ, ಪೋಷಿಸಬೇಕಾದ ಅಗತ್ಯವಿದೆ. ಭವಿಷ್ಯದ ಪ್ರಜೆಗಳಾದ ಮಕ್ಕಳಲ್ಲಿ ಈ ಬಗ್ಗೆ ಅರಿವು ಮೂಡಿಸಬೇಕಾಗಿದೆ’ ಎಂದರು.
‘ಕೆರೆ ಹಬ್ಬದಲ್ಲಿ’ ಮಕ್ಕಳೊಂದಿಗೆ ಸ್ಥಳೀಯರು ಹಾಗೂ ಪರಿಸರ ತಜ್ಞರೂ ಪಾಲ್ಗೊಂಡರು. ಕೆರೆ ಸಂರಕ್ಷಣೆಗೆ ಪಣ ತೊಟ್ಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.