ಬೆಂಗಳೂರು: ‘ನಗರದ ನಾಲ್ಕೂ ದಿಕ್ಕಿನಲ್ಲಿ ಹೊಸ ವಿಮಾನ ನಿಲ್ದಾಣಗಳ ಸ್ಥಾಪನೆಗೆ ಈಗಿನಿಂದಲೇ ಯೋಜನೆ ರೂಪಿಸುವ ಅಗತ್ಯವಿದೆ’ ಎಂದು ಉದ್ಯಮಿ ಕ್ಯಾಪ್ಟನ್ ಜಿ.ಆರ್.ಗೋಪಿನಾಥ್ ಅಭಿಪ್ರಾಯಪಟ್ಟರು.
ಕರ್ನಾಟಕ ರಾಜ್ಯ ಬ್ರಾಹ್ಮಣರ ಅಭಿವೃದ್ಧಿ ಮಂಡಳಿಯಲ್ಲಿ ಸೋಮವಾರ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ದೇವನಹಳ್ಳಿಯಲ್ಲಿ ಇರುವ ಕೇಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಒಪ್ಪಂದ ಏಳು ವರ್ಷಗಳಲ್ಲಿ ಮುಕ್ತಾಯವಾಗಲಿದೆ. ಆ ಒಪ್ಪಂದ ಮುಗಿಯುವ ಮುನ್ನವೇ ಹೊಸ ವಿಮಾನ ನಿಲ್ದಾಣಗಳ ಸ್ಥಾಪನೆಗೆ ಸರ್ಕಾರ ಪ್ರಯತ್ನಗಳನ್ನು ಚುರುಕುಗೊಳಿಸಬೇಕು’ ಎಂದರು.
‘ಹೆಚ್ಎಎಲ್ ವಿಮಾನ ನಿಲ್ದಾಣವನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದು. ಅದಕ್ಕೆ ಮತ್ತಷ್ಟು ಶಕ್ತಿ ತುಂಬಬೇಕು’ ಎಂದು ಸಲಹೆ ನೀಡಿದರು
‘ಮೈಸೂರಿನ ಮಹಾರಾಜರು ದೂರದೃಷ್ಟಿಯಿಂದ ಜಾಗ ಕೊಟ್ಟು ಆರಂಭಿಸಿದ ಸರ್ಕಾರಿ ವಿಮಾನ ತರಬೇತಿ ಶಾಲೆ ಇಂದು ದುರವಸ್ಥೆಯ ತಾಣವಾಗಿದೆ. ತರಬೇತಿ ಶಾಲೆ ಮುಚ್ಚುವಂತೆ ಕಾಣದ ಕೈಗಳು ಒತ್ತಡ ಹಾಕುತ್ತಿವೆ’ ಎಂದು ತಿಳಿಸಿದರು.
ಮಂಡಳಿಯ ಅಧ್ಯಕ್ಷ ಅಸಗೋಡು ಜಯಸಿಂಹ, ವ್ಯವಸ್ಥಾಪಕ ನಿರ್ದೇಶಕಿ ಕೆ.ದೀಪಶ್ರೀ, ನಿರ್ದೇಶಕರು ಉಪಸ್ಥಿತರಿದ್ದರು.
ರಕ್ಷಣಾ ವಲಯದ ಸ್ವಾವಲಂಬನೆಯಲ್ಲಿ ಬೇಕಾದಷ್ಟು ಕೆಲಸ ಮಾಡಲು ಬೆಂಗಳೂರು ಅತ್ಯಂತ ಪ್ರಶಸ್ತ ನಗರವಾಗಿದೆ. ಸರ್ಕಾರ ಇಲ್ಲಿ ವಿಮಾನ ತರಬೇತಿ ಶಾಲೆಗಳನ್ನು ಆರಂಭಿಸಬೇಕು.ಕ್ಯಾ.ಜಿ.ಆರ್.ಗೋಪಿನಾಥ್