ಬೆಂಗಳೂರು: ಕೈಯಿಲ್ಲ ಅಷ್ಟೇ. ಕನಸು ಈಡೇರಿಸಿಕೊಳ್ಳಲು ಅದು ಅಡ್ಡಿಯಾಗಲಿಲ್ಲ. ಒಂದೇ ಕೈಯಲ್ಲಿ ಸ್ಟೀರಿಂಗ್ ಹಿಡಿದು ಕ್ಯಾಬ್ ಓಡಿಸಿಯೇಬಿಟ್ಟರು ರಾಘವೇಂದ್ರ.
ಹೆಸರಘಟ್ಟದಿಂದ ಗೋರಗುಂಟೆ ಪಾಳ್ಯದವರೆಗೆ ಮಿನಿಕ್ಯಾಬ್ ಓಡಿಸುತ್ತಾರೆ. ನಿರ್ವಾಹಕರಾಗಿ ಸೇರಿದ ಅವರು ಹಂತಹಂತವಾಗಿ ವಾಹನ ಚಾಲನೆ ಕಲಿತರು. ವಾಹನವೇನೋ ಓಡಿಸುತ್ತಾರೆ. ಆದರೆ, ಚಾಲನಾ ಪರವಾನಗಿ ಸಿಗಲು ಅಂಗವಿಕಲತೆ ಅಡ್ಡಿಯಾಗಿದೆ. ಹಾಗಾಗಿ ಬಹುಪಾಲು ಕಾಲ ನಿರ್ವಾಹಕನಾಗಿಯೇ ಮುಂದುವರಿಯಬೇಕಾದ ಅನಿವಾರ್ಯತೆ ಅವರದ್ದು.
ರಾಘವೇಂದ್ರ ಓದಿದ್ದು ಏಳನೇ ತರಗತಿ. ಬದುಕು ಸಾಗಿಸಲು ಏನಾದರೂ ಕೆಲಸ ಬೇಕಿತ್ತು. ಕೈಯಿಲ್ಲದ ನೀವೇನು ಮಾಡುತ್ತೀರಿ? ಎಂದು ಎಲ್ಲರೂ ಕೇಳಿದರು. ಏನೇ ಕೆಲಸ ಕೊಟ್ಟರೂ ಮಾಡುತ್ತೇನೆ ಎಂದು ವಿಶ್ವಾಸ ತೋರಿದರೂ ಯಾರೂ ಕೆಲಸ ಕೊಟ್ಟಿರಲಿಲ್ಲ ಎಂದು ನೋವು ತೋಡಿಕೊಂಡರು ರಾಘವೇಂದ್ರ.
ಗೆಳೆಯನೊಬ್ಬನ ನೆರವಿನಿಂದ ವ್ಯಾನ್ನಲ್ಲಿ ನಿರ್ವಾಹಕನ ಕೆಲಸ ಸಿಕ್ಕಿತು. ಅದೇ ವಾಹನದಲ್ಲಿ ಚಾಲನೆ ನೋಡಿದರು. ನಿಧಾನಕ್ಕೆ ಪ್ರಯೋಗಕ್ಕಿಳಿದರು. ಕಸುಬು ಕೈಹಿಡಿಯಿತು.
ನಿರ್ವಾಹಕನ ಕೆಲಸದಲ್ಲಿ ಅವರಿಗೆ ₹8 ಸಾವಿರ ಸಿಗುತ್ತಿದೆ. ಇಬ್ಬರು ಮಕ್ಕಳಿದ್ದಾರೆ. ಸಂಸಾರ ನಿಭಾಯಿಸಬೇಕಾಗಿದೆ. ಚಾಲನಾ ಪರವಾನಗಿ ಸಿಕ್ಕಿದ್ದರೆ ಏನಾದರೂ ಪ್ರಯತ್ನಿಸಬಹುದಿತ್ತು ಎಂದರು ಅವರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.