ಬೆಂಗಳೂರು: ಲೋಕಾಯುಕ್ತರು ಪದೇ ಪದೇ ಆದೇಶ ನೀಡಿದರೂ ಕೆರೆ ಒತ್ತುವರಿ ತೆರವಿಗೆ ತಹಶೀಲ್ದಾರ್ಗಳು (ಬೆಂಗಳೂರು ಉತ್ತರ ಮತ್ತು ಬೆಂಗಳೂರು ಉತ್ತರ ಹೆಚ್ಚುವರಿ) ಮುಂದಾಗುತ್ತಿಲ್ಲ ಎಂದು ‘ನಮ್ಮ ಬೆಂಗಳೂರು’ ಪ್ರತಿಷ್ಠಾನ ದೂರಿದೆ.
ಖಾಸಗಿ ರಸ್ತೆ ನಿರ್ಮಾಣಕ್ಕೆ ಒತ್ತುವರಿ ಮಾಡಿಕೊಂಡಿರುವ ಸಿಂಗಪುರ ಕೆರೆ ಜಾಗವನ್ನು ತೆರವುಗೊಳಿಸುವಂತೆ ಆದೇಶ ನೀಡಿದರೂ ಸಂಬಂಧಿಸಿದ ತಹಶೀಲ್ದಾರ್ ಕ್ರಮ ತೆಗೆದುಕೊಂಡಿಲ್ಲ.
ಒತ್ತುವರಿ ತೆರೆವುಗೊಳಿಸದ ಕಾರಣಕ್ಕೆ ಬೆಂಗಳೂರು ಪೂರ್ವ ತಹಶೀಲ್ದಾರ್ಗೆ ಲೋಕಾಯುಕ್ತರು ಷೋಕಾಸ್ ನೋಟಿಸ್ ನೀಡಿದ್ದರು.
ನಶಿಸುತ್ತಿರುವ ಕೆರೆಗಳ ರಕ್ಷಣೆಗೆ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ನೇತೃತ್ವದಲ್ಲಿ ಪ್ರತಿಷ್ಠಾನವು 2017ರಿಂದ ಹೋರಾಟ ನಡೆಸುತ್ತಿದೆ. ಅಬ್ಬಿಗೆರೆ, ಸಿಂಗಪುರ, ಕಗ್ಗದಾಸಪುರ ಮತ್ತು ಗುಬ್ಬಾಲಾಲ ಕೆರೆಗಳು ಸೇರಿದಂತೆ ಒಟ್ಟು 23 ಕೆರೆಗಳಿಗೆ ಸಂಬಂಧಿಸಿದಂತೆ ‘ನಮ್ಮ ಬೆಂಗಳೂರು’ ಪ್ರತಿಷ್ಠಾನ ಮತ್ತು ‘ಯುನೈಟೆಡ್ ಬೆಂಗಳೂರು’ ತಂಡ ಈಗಾಗಲೇ ಲೋಕಾಯುಕ್ತಕ್ಕೆ ದೂರು ನೀಡಿವೆ.
‘ಅಬ್ಬಿಗೆರೆ ಕೆರೆ ಜಾಗದ ಅಕ್ರಮ ಒತ್ತುವರಿ ತೆರವಿಗೆ ಬೆಂಗಳೂರು ಉತ್ತರ ತಹಶೀಲ್ದಾರ್ಗೆ ಲೋಕಾಯುಕ್ತರು ಎಂಟು ವಾರಗಳ ಗಡುವು ವಿಧಿಸಿದ್ದಾರೆ. ಇದೇ ಕೆರೆಯ ಜಾಗ ಅತಿಕ್ರಮಿಸಿಕೊಂಡು ಖಾಸಗಿಯವರು ರಸ್ತೆ ನಿರ್ಮಿಸುತ್ತಿದ್ದು, ಅದನ್ನು ತಡೆಯುವಂತೆಯೂ ನಿರ್ದೇಶನ ನೀಡಲಾಗಿದೆ. ಅದರ ತೆರವಿಗೆ ಲೋಕಾಯುಕ್ತರು ಮತ್ತೆ ಮೂರು ತಿಂಗಳ ಹೆಚ್ಚುವರಿ ಸಮಯ ಅವಕಾಶ ನೀಡಿದ್ದಾರೆ’ ಎಂದು ಪ್ರತಿಷ್ಠಾನ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.