ಬೆಂಗಳೂರು: ಸಾಹಿತ್ಯ ರಚನೆಯೇ ಬಿಡುಗಡೆಯ ಹಾದಿ ಎಂಬುದರಲ್ಲಿ ನಂಬಿಕೆ ಇಟ್ಟಿರುವ ಗೃಹಿಣಿಯರು ತಮ್ಮ ಬರಹಗಳನ್ನು ನವ ತಂತ್ರಜ್ಞಾನದ ಸಹಾಯದಿಂದ ಜಗತ್ತಿನ ಮುಂದಿಡುತ್ತಿದ್ದಾರೆ.
ಇಂಥ ನಾಲ್ವರು ಗೃಹಿಣಿಯರ ಸಾಹಿತ್ಯ ಪಯಣದ ಮಾತುಗಳಿಗೆ ಲೇಖಕಿ ಪ್ರತಿಭಾ ನಂದಕುಮಾರ್ ನಡೆಸಿಕೊಟ್ಟ ‘ಡಿಜಿಟಲ್ ಸಾಹಿತ್ಯ ಕ್ರಾಂತಿ– ಲೇಖಕರಾದ ಓದುಗರು’ ಗೋಷ್ಠಿ ಸಾಕ್ಷಿಯಾಯಿತು.
ಬನಶಂಕರಿ ಕುಲಕರ್ಣಿ, ಶೈನಾ ಶ್ರೀನಿವಾಸ ಶೆಟ್ಟಿ, ರೋಹಿಣಿ ರಂಗನಾಥನ್ ಮತ್ತು ಕೆ.ವಿ. ಕಸ್ತೂರಿ ರಾಮ್ ತಮ್ಮ ಅನುಭವಗಳನ್ನು ಈ ಗೋಷ್ಠಿಯಲ್ಲಿ ಹಂಚಿಕೊಂಡರು. ಇವರೆಲ್ಲರೂ ತಾವು ಬರೆದ ಕಾದಂಬರಿ, ಕಥೆ, ಕವನಗಳನ್ನು ‘ಪ್ರತಿಲಿಪಿ’ ಎನ್ನುವ ಡಿಜಿಟಲ್ ವೇದಿಕೆಯ ಮೂಲಕ ಪ್ರಕಟಿಸಿದ್ದಾರೆ. ಲಕ್ಷಗಟ್ಟಲೆ ಓದುಗರನ್ನೂ ಹೊಂದಿದ್ದಾರೆ.
‘ಬರೆದದ್ದನ್ನು ಜಗತ್ತಿಗೆ ತೋರಿಸುವ ಧೈರ್ಯ ಮತ್ತು ಅವಕಾಶ ಎರಡೂ ಇರಲಿಲ್ಲ. ಪತ್ರಿಕೆಗಳಿಗೆ ಬರಹಗಳನ್ನು ಕಳುಹಿಸಿದರೂ ಅವು ಪ್ರಕಟಗೊಳ್ಳಲೇ ಇಲ್ಲ. ಜೊತೆಗೆ ಎಲ್ಲ ಹೆಣ್ಣು ಮಕ್ಕಳಂತೆ ಕುಟುಂಬದ ಕರ್ತವ್ಯ ನಿರ್ವಹಣೆಯ ಒತ್ತಡವೂ ನಮ್ಮ ಮೇಲಿತ್ತು. ಈ ಎಲ್ಲ ಒತ್ತಡಗಳಿಂದ ಸಾಹಿತ್ಯ ರಚನೆ ಮೂಲಕ ಬಿಡುಗಡೆ ಸಿಕ್ಕಿತು. ಬರೆದದ್ದನ್ನು ಪ್ರಕಟಿಸಲು ‘ಪ್ರತಿಲಿಪಿ’ ಎನ್ನುವ ಡಿಜಿಟಲ್ ವೇದಿಕೆ ನೆರವಾಯಿತು’ ಎಂದು ತಮ್ಮ ಸಾಹಿತ್ಯ ಪಯಣವನ್ನು ಮೆಲುಕು ಹಾಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.