ADVERTISEMENT

ಸಿನಿಮಾದಲ್ಲಿ ಅರಳಿದ ಸೃಜನಶೀಲತೆ: ಲೇಖಕರ ಅಭಿಪ್ರಾಯ

‘ಲೈಟ್ಸ್‌ ಕ್ಯಾಮೆರಾ ಕೋವಿಡ್‌’ ಕುರಿತ ಸಂವಾದ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2021, 20:35 IST
Last Updated 18 ಡಿಸೆಂಬರ್ 2021, 20:35 IST

ಬೆಂಗಳೂರು: ಸಿನಿಮಾ ಕ್ಷೇತ್ರದ ಸೃಜನಶೀಲತೆ, ಕಲಾತ್ಮಕತೆ ಜಾಗೃತಗೊಂಡಿದೆ. ಸಿನಿ ಪ್ರೇಕ್ಷಕರು ತಮ್ಮ ಆಯ್ಕೆಯನ್ನು ಗಟ್ಟಿದನಿಯಲ್ಲಿ ಹೇಳುತ್ತಿದ್ದಾರೆ. ತಾರಪಟ್ಟಗಳು ಹುಸಿಯಾಗಿವೆ. ನಿಜದ ನಾಯಕರ ಪರಿಚಯವಾಗಿದೆ. ಕೋವಿಡೋತ್ತರ ಕಾಲ ಚಿತ್ರ ಜಗತ್ತಿಗೆ ಬಹಳಷ್ಟನ್ನು ಕಲಿಸಿದೆ...

‘ಲೈಟ್ಸ್‌ ಕ್ಯಾಮೆರಾ ಕೋವಿಡ್‌’ ಕುರಿತ ಸಂವಾದದಲ್ಲಿ ಚರ್ಚೆಯಾದ ಸಂಗತಿಗಳಿವು.

ಸಿನಿಮಾ ಕ್ಷೇತ್ರದಲ್ಲಿ ಸೃಜನಾತ್ಮಕತೆ ಎಚ್ಚರಗೊಂಡಿದೆ ಎಂದು ಪ್ರತಿಪಾದಿಸಿದ ಲೇಖಕಿ ಗೀತಾ ಅರವಮುದನ್ ಅದಕ್ಕೆ ಪೂರಕವಾಗಿ ಮಲೆಯಾಳಂನ ‘ಸೀ ಯೂ ಸೂನ್‌’ ಚಿತ್ರದ ನಿದರ್ಶನ ನೀಡಿದರು.

ADVERTISEMENT

ಓವರ್‌ ದಿ ಟಾಪ್‌ (ಒಟಿಟಿ) ಎಲ್ಲರಿಗೂ ಅವಕಾಶಗಳನ್ನ ನೀಡಿದೆ. ಮಹಿಳೆಯರು ಸೇರಿದಂತೆ ಹೊಸಬರಿಗೆ ಅವಕಾಶಗಳ ಬಾಗಿಲನ್ನೇ ತೆರೆದಿಟ್ಟಿದೆ. ಒಟಿಟಿ ಗಟ್ಟಿಯಾಗಿ ನೆಲೆಯೂರಲು ಕೋವಿಡ್‌ ಕಾಲ ನೆರವಾಗಿದೆ. ಅದು ಕೋವಿಡ್‌ ನಂತರದಲ್ಲೂ ಬಲವಾಗಿ ಬೇರೂರಲಿದೆ ಎಂದರು.

ಕೋವಿಡ್‌ ಹಾಗೂ ಲಾಕ್‌ಡೌನ್‌ ಜನರನ್ನು ಮಾನಸಿಕವಾಗಿ ಬಹಳಷ್ಟು ಕುಗ್ಗಿಸಿದೆ. ಅದರ ಜೊತೆಗೆ ಬದುಕಿನ ಸೌಂದರ್ಯ ಹಾಗೂ ಮೌಲ್ಯವನ್ನೂ ತಿಳಿಸಿದೆ. ಅದು ಸಿನಿಮಾ ಕ್ಷೇತ್ರವನ್ನೂ ಪ್ರಭಾವಿಸಿದೆ ಎಂದು ನಿರ್ಮಾಪಕ ಹಾಗೂ ಲೇಖಕ ಮನೀಶ್‌ ಮುಂದ್ರಾ ಪ್ರತಿಪಾದಿಸಿದರು.

ಕೋವಿಡೋತ್ತರ ಕಾಲ ಸಿನಿಮಾ ನೋಡುಗರನ್ನು ಸಾಕಷ್ಟ ಬದಲಾಯಿಸಿದೆ. ಎಲ್ಲವನ್ನು ಒಪ್ಪಿಕೊಳ್ಳುವ ಮನಸ್ಥಿತಿಯಿಂದ ಹೊರಬಂದು ತಮ್ಮ ಆಯ್ಕೆಯನ್ನು ಗಟ್ಟಿ ನಿಲುವಿನೊಂದಿಗೆ ಹೇಳುವ ದಿಟ್ಟತನ ಪ್ರದರ್ಶಿಸುತ್ತಿದ್ದಾರೆ ಎಂದರು.

ಕೊರೊನಾ ಕಾಲಘಟ್ಟದಲ್ಲಿ ಈಗಿನ ಪೀಳಿಗೆ ಸಾವಿಗೆ ಹತ್ತಿರವಾಗಿ ಹೊರಬಂದಿದೆ. ಪ್ರೀತಿಪಾತ್ರರ ಸಾವಿನಲ್ಲೂ ಏನು ಮಾಡಲಾಗದ ಸ್ಥಿತಿ ಸಾಕಷ್ಟು ಬದಲಾವಣೆಗಳಿಗೆ ಪ್ರೇರಕವಾಗಿದೆ. ತಾರಪಟ್ಟಗಳ ಭ್ರಮೆಯಿಂದ ಹೊರ ಬಂದಿದ್ದಾರೆ. ತೆರೆಯ ಹೀರೊಗಳು ನಿಜದ ನಾಯಕರಲ್ಲ ಎಂಬ ವಾಸ್ತವ ಅರಿತಿದ್ದಾರೆ. ಈ ಬೆಳೆವಣಿಗೆಗಳು ಚಲನಚಿತ್ರ ಕ್ಷೇತ್ರದಲ್ಲಿ ವಿಷಯಾಧಾರಿತ ಸಿನಿಮಾಗಳಿಗೆ ವೇದಿಕೆ ಕಲ್ಪಿಸಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಚಿತ್ರ ನಿರ್ದೇಶಕ ಹಾಗೂ ನಿರ್ಮಾಪಕ ನಿರಂಜನ್‌ ತಾಡೆ ಮಾತನಾಡಿ, ಚಿತ್ರಮಂದಿರಗಳಲ್ಲಿ ಒಟ್ಟಾಗಿ ಕುಳಿತು ಸಿನಿಮಾ ನೋಡುವ ಸಂಸ್ಕೃತಿಯನ್ನು ಕೊರೊನಾ ಕಾಲಘಟ್ಟ ಕಣ್ಮರೆಯಾಗಿಸಿದೆ. ಇದರಿಂದಾಗಿ ಸಿನಿಮಾ ನೋಡುವಾಗಿನ ಸಾಮಾಜಿಕ ಸಾಧ್ಯತೆಗಳು ದೂರವಾಗಿವೆ. ಮನೆಯ ಟಿವಿ ಪರದೆಗಳು ಹಿಗ್ಗಿವೆ. ಅದೇ ವೇಳೆ ಚಿತ್ರಮಂದಿರದ ಪರದೆ ಕುಗ್ಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.